ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ: ನ್ಯಾ.ನಾಗಮೋಹನ್ ದಾಸ್

Update: 2018-12-13 18:14 GMT

ಮೈಸೂರು,ಡಿ.13: ಭಾರತದ ಸಂವಿಧಾನವನ್ನು ಪ್ರತಿಯೊಬ್ಬರೂ ಓದುವುದು ಹಿಂದೆಂದಿಗಿಂತಲೂ ಈಗ ಅತ್ಯಂತ ಅಗತ್ಯವಾಗಿದೆ ಎಂದು ಹೆಚ್.ಎನ್. ನ್ಯಾಯಮೂರ್ತಿ ನ್ಯಾ.ನಾಗಮೋಹನ್ ದಾಸ್ ಅವರು ಹೇಳಿದರು.   

ಆಡಳಿತ ತರಬೇತಿ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ 'ಸಂವಿಧಾನ ಓದು, ಮತ್ತು ಸಾಮಾಜಿಕ ನ್ಯಾಯ' ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ನಾವು ಭಾರತವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಭಾರತವನ್ನು ಸರಿಯಾಗಿ ಓದದಿದ್ದರೆ ಸಂವಿಧಾನದ ಆಶಯ ಮತ್ತು ಪಾವಿತ್ರ್ಯತೆ ಅರ್ಥವಾಗುವುದಿಲ್ಲ ಎಂದು ಹೇಳಿದರು.

ಭಾರತಕ್ಕೆ ಸುಮಾರು 5 ಸಾವಿರ ವರ್ಷಗಳಿಂದ ಹಲವಾರು ಜನಾಂಗದ, ಹಲವಾರು ಭಾಷಿಕರು ವಲಸೆ ಬಂದು ನೆಲೆಸಿದ್ದಾರೆ. ಹಾಗಾಗಿ ವಿವಿಧ ಜಾತಿ, ಭಾಷೆ, ಬಣ್ಣ ಮುಂತಾದ ವೈವಿಧ್ಯತೆಯುಳ್ಳ ಜನರು ಇದ್ದಾರೆ. ಇವರೆಲ್ಲರ ಗೌರವಯುತ ಬದುಕಿಗೆ ಸಂವಿಧಾನ ಆಧಾರವಾಗಿದೆ ಎಂದರು.

ಭಾರತ ಸಂವಿಧಾನದಲ್ಲಿ 60ಕ್ಕೂ ಹೆಚ್ಚು ದೇಶಗಳ ಸಂವಿಧಾನದ ಒಳ್ಳೆಯ ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕಾದ ನಾಗರಿಕ ಹೋರಾಟ, ಫ್ರಾನ್ಸಿನ ಕ್ರಾಂತೀಯ ಭ್ರಾತೃತ್ವ, ಸಮಾನತೆ, ರಷ್ಯಾದ ಲೆನಿನ್ ತತ್ವದ ಕಾರ್ಮಿಕರ ಮಹತ್ವವನ್ನು ಒಳಗೊಂಡ ಸಮಾಜವಾದಿ ತತ್ವವನ್ನು ಸೇರಿಸಲಾಗಿದೆ ಎಂದರು. ಸಂವಿಧಾನ ಜಾರಿಗೆ ಬಂದು 68 ವರ್ಷಗಳಾದರೂ ಕೂಡ ಈ ಸಂವಿಧಾನದ ಓದು ಸರಿಯಾಗಿ ಆಗಿಲ್ಲ. ಇವತ್ತು ಕೂಡಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಸಂವಿಧಾನದ ಜ್ಞಾನ ಕಡಿಮೆ ಇದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಸಾಮಾನ್ಯ ಬೂನಾದಿ ತರಬೇತಿ ಪಡೆಯುತ್ತಿರುವ ಡಿವೈಎಸ್‍ಪಿ ಪ್ರಶಿಕ್ಷಣಾರ್ಥಿಗಳು ಹಾಗೂ ಬಂಧಿಖಾನೆ ಅಧೀಕ್ಷಕ ಪ್ರಶಿಕ್ಷಣಾರ್ಥಿಗಳು, 'ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಂವೇದನೆ' ವಿಷಯದ ನಾಟಕ ಪ್ರದರ್ಶನ ಮಾಡಿದರು.     

ನ್ಯಾ. ನಾಗಮೋಹನ್ ದಾಸ್ ಅವರೊಂದಿಗೆ ಸಾಹಿತಿ ಹಾಗೂ ಚಿಂತಕರಾದ ದೇವನೂರು ಮಹಾದೇವ, ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾದ ವಿ.ಭಾಗ್ಯಲಕ್ಷ್ಮೀ ಹಾಗೂ ಇನ್ನಿತರ ಗಣ್ಯರು ನಾಟಕ ವೀಕ್ಷಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News