ಸರಕಾರಿ ಅನುದಾನಗಳ ಸಮರ್ಪಕ ಬಳಕೆಗೆ ಅಧಿಕಾರಿಗಳಿಂದ ನಿರ್ಲಕ್ಷ್ಯ: ಚಿಕ್ಕಮಗಳೂರು ಜಿಪಂ ಸದಸ್ಯ ಮಹೇಂದ್ರ

Update: 2018-12-13 18:23 GMT

ಚಿಕ್ಕಮಗಳೂರು, ಡಿ.13: ಚುನಾಯಿತ ಪ್ರತಿನಿಧಿಗಳು ಸಭೆಯಲ್ಲಿ ಹೇಳುವುದೇ ಒಂದು, ಮಾಡುವುದು ಇನ್ನೊಂದು. ಪ್ರತೀ ಸಭೆಗಳಲ್ಲೂ ಅಧಿಕಾರಿಗಳಿಗೆ ತಮ್ಮ ಜವಬ್ದಾರಿಗಳ ಬಗ್ಗೆ ಹೇಳುವುದೇ ಆಯಿತು, ಅಧಿಕಾರಿಗಳು ಕೇಳುವುದೇ ಆಯಿತು. ಇದು ಬಿಟ್ಟರೇ ಸರಕಾರದ ಬೇರೆ ಯಾವ ಕೆಲಸಗಳೂ ಪೂರ್ಣಗೊಂಡಿಲ್ಲ ಎಂದು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಇಲಾಖೆಗೆ ಬರುವ ಅನುದಾನದ ಬಗ್ಗೆ ಚರ್ಚಿಸಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಯೋಜನೆಗಳ ಜಾರಿಯನ್ನು ಪೂರ್ಣಗೊಳಿಸಬೇಕೆಂದು ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದ ಅವರು, ಕೃಷಿ ಅಧಿಕಾರಿಗಳು ಜಿಲ್ಲಾದ್ಯಂತ ಇರುವ ಗೊಬ್ಬರದ ಅಂಗಡಿಗಳಲ್ಲಿ ದರಪಟ್ಟಿಯ ನಾಮಫಲಕ ಹಾಕಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿವೆ. ಅಧಿಕಾರಿಗಳು ತಕ್ಷಣವೆ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ನಾಮಫಲಕ ಮತ್ತು ಲೆಕ್ಕಪತ್ರಗಳನ್ನು ಸರಿಯಾಗಿ ನೀಡದಿರುವ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಸೂಚಿಸಿದರು.

ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೀಡಬೇಕು. ಸಾವಯವ ಗೊಬ್ಬರ ಬಳಸಿ ಬೆಳೆದಿರುವ ರೈತರನ್ನು ಪ್ರೋತ್ಸಾಯಿಸಿ ಉತ್ತಮ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದ ಅವರು, ಅಡಕೆ ಸುಲಿಯುವ ಯಂತ್ರಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದ್ದರೂ ಕಡೂರು, ತರೀಕೆರೆ, ಮೂಡಿಗೆರೆ ಭಾಗದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಬೆಳೆಗಾರರಿಗೆ ಸಬ್ಸಿಡಿ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಎಲ್ಲಾ ಗ್ರಾಮ ಸಭೆಗಳಲ್ಲೂ ಅಧಿಕಾರಿಗಳು ಭಾಗವಹಿಸಿ ಇಲಾಖೆಯ ಸೌಲಭ್ಯಗಳ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ನೀಡಬೇಕೆಂದು ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಗುಣಮಟ್ಟದ ಪೈಪ್ ಮತ್ತು ಮೋಟಾರನ್ನು ವಿತರಿಸುತ್ತಿಲ್ಲ ಎಂದು ಆರೋಪಗಳು ಕೇಳಿಬಂದಿವೆ. ಅಧಿಕಾರಿಗಳು ಗುಣಮಟ್ಟ ಪರೀಕ್ಷಿಸಿ ರೈತರಿಗೆ ಯೋಜನೆಯ ಸಲಕರಣೆಗಳನ್ನು ವಿತರಿಸಬೇಕೆಂದರು.

ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಕೈಗಾರಿಕೆ ಇಲಾಖೆಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿ ನೀಡಿದ್ದರೂ ಬ್ಯಾಂಕಿನಲ್ಲಿ ಸಾಲ ಸರಿಯಾಗಿ ವಿತರಿಸುತ್ತಿಲ್ಲ. ಲಕ್ಯಾ ಹೋಬಳಿ ತೀವ್ರ ಬರಕ್ಕೆ ತುತ್ತಾಗಿದೆ. ಜನರು, ಜಾನುವಾರುಗಳು ನೀರಿಲ್ಲದೇ ತತ್ತರಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬರಗಾಲ ಪ್ರದೇಶವೆಂದು ಬರ ಕುರಿತ ಸಮಗ್ರ ಮಾಹಿತಿಯನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕು. ಸರಕಾರ ಬಿಡುಗಡೆ ಮಾಡುವ ವಿಶೇಷ ಅನುದಾನ ಬಳಸಿ ಲಕ್ಯಾ ಹೋಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಮತ್ತು ನೀರನ್ನು ವಿತರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಚುನಾವಣೆಗಳು ಸಮೀಪಿಸುತ್ತಿದ್ದು, ತಕ್ಷಣ ಅಧಿಕಾರಿಗಳು ಸರಕಾರದ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಜನವರಿ ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಜಿಪಂ ಸದಸ್ಯ ಮಹೇಶ್ ಒಡೆಯರ್ ತಿಳಿಸದರೆ, ಕೃಷಿ ಇಲಾಖೆಯಿಂದ ಮಾಡುತ್ತಿರುವ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ, ಪಶುಪಾಲನೆ ಇಲಾಖೆ ವತಿಯಿಂದ ಹೆಚ್ಚಿನ ಮಳಿಗೆ ಹಾಕುವುದರ ಜೊತೆಗೆ ಅಧಿಕಾರಿಗಳು ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕೆಂದು ಜಿಪಂ ಸದಸ್ಯ ಪ್ರಭಾಕರ್ ಸಭೆಯ ಗಮನಸೆಳೆದರು.

ಸಭೆಯಲ್ಲಿ ಜಿಪಂ ಸದಸ್ಯರಾದ ಪ್ರೇಮಾ, ಕೆ.ವಿ.ಮಂಜುನಾಥ್, ಸುಧಾ ಯೋಗೀಶ್, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News