ಹನೂರು ದೇವಸ್ಥಾನದ ಪ್ರಕರಣವನ್ನು ಸಿಓಡಿಗೆ ವಹಿಸಿ: ಸಂಸದ ಆರ್.ಧ್ರುವನಾರಾಯಣ ಒತ್ತಾಯ

Update: 2018-12-16 18:02 GMT

ಮೈಸೂರು,ಡಿ.16: ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗತ್ತಿ ಮಾರಮ್ಮನ ದೇವಸ್ಥಾನದಲ್ಲಿ ನಡೆದ ವಿಷಾಹಾರ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಬೇಕು ಎಂದು ಸಂಸದ ಆರ್.ಧ್ರವನಾರಾಯಣ ಒತ್ತಾಯಿಸಿದರು.

ಕೆ.ಆರ್.ಆಸ್ಪತ್ರೆಯಲ್ಲಿ ರವಿವಾರ ಅಸ್ವಸ್ಥರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರ ಪ್ರಕರಣ. ದೇಶದಲ್ಲಿ ಇದೇ ಮೊದಲು ಇಂತಹ ಘಟನೆ ನಡೆದಿರುವುದು, ಇದರ ಸಂಪೂರ್ಣ ಮಾಹಿತಿ ಪಡೆಯಲು ಸಿಓಡಿ ತನಿಖೆಗೆ  ವಹಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಹೇಳಿದರು.

ಆ ಭಾಗದ ಸಂಸದನಾದ ನನಗೆ ಅಲ್ಲಿನ ಪರಿಸ್ಥಿತಿ ಕಂಡು ಆಘಾತವಾಗಿದೆ. ಅಲ್ಲಿನ ಹೆಚ್ಚು ಜನರು ಕೂಲಿ ಮಾಡಿ ಬುದುಕುತ್ತಿರುವವರು, ಇವರ ಕುಟುಂಬಗಳಿಗೆ ಈಗಾಗಲೇ ನಾನು ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಇಂತಹ ಘಟನೆ ನಡೆಯಬಾರದಿತ್ತು. ಇದೊಂದು ಅಮಾನವೀಯ ಘಟನೆ ಎಂದು ಬೇಸರ ವ್ಯಕ್ತಪಡಿಸಿದರು.

ಆ ಗ್ರಾಮದಲ್ಲಿ ಶಾಂತಿ ಸಭೆಯನ್ನು ಶೀಘ್ರದಲ್ಲಿ ಮಾಡುತ್ತೇನೆ. ಎರಡು ಬಣಗಳ ನಡುವಿನ ವಿವಾದದ ಬಗ್ಗೆ ಮಾಹಿತಿ ಪಡೆದು ಇಬ್ಬರನ್ನು ಒಟ್ಟಿಗೆ ಕೂರಿಸಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ. ಇಂತಹ ಘಟನೆ ಮುಂದೆ ಸಂಭವಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News