ಜನರಿಗೆ ಸದಭಿರುಚಿಯ ಚಿತ್ರ ತೋರಿಸುವ ಅಗತ್ಯವಿದೆ: ಸಚಿವೆ ಡಾ.ಜಯಮಾಲಾ

Update: 2018-12-17 18:02 GMT

ಬೆಳಗಾವಿ, ಡಿ.17: ಕನ್ನಡ ನಾಡಿನ ಎಲ್ಲ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಿತವಾಗಿ ಕನ್ನಡ ಚಲನಚಿತ್ರೋತ್ಸವ ಆಯೋಜಿಸುವ ಮೂಲಕ ನಮ್ಮ ಮಕ್ಕಳಿಗೆ ಸದಭಿರುಚಿಯ ಚಿತ್ರಗಳನ್ನು ತೋರಿಸುವ ಅಗತ್ಯವಿದೆ. ಈ ಮೂಲಕ ಕನ್ನಡ ಚಿತ್ರಗಳ ನಿರ್ಮಾಣ, ಕಥಾ ಹಂದರ ಹಾಗೂ ತಾಂತ್ರಿಕ ಬೆಳವಣಿಗೆಯಲ್ಲಿ ಮತ್ತು ಸಮಾಜದ ಏಳ್ಗೆಯಲ್ಲಿ ನಮ್ಮ ಯುವ ಸಮುದಾಯವನ್ನು ತೊಡಗಿಸಿಕೊಳ್ಳಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಡಾ.ಜಯಮಾಲಾ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ನಗರದ ಕೆ.ಎಲ್.ಇ. ಶತಮಾನೋತ್ಸವ ಸ್ಮಾರಕ ಭವನದ ಡಾ.ಬಿ.ಎಸ್.ಕೋಡ್ಕಿಣಿ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ ಕನ್ನಡ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಲನಚಿತ್ರ ಮನೋರಂಜನೆ ಮಾತ್ರವಲ್ಲ, ಮನೋವಿಕಾಸಕ್ಕೆ ದಾರಿಯಾಗಿದೆ. 85 ವರ್ಷಗಳ ಹರೆಯದಲ್ಲಿರುವ ಕನ್ನಡ ಚಿತ್ರೋದ್ಯಮ ಇಂದು ರಂಗಭೂಮಿ ಮತ್ತು ಚಿತ್ರೋದ್ಯಮದ ದಿಗ್ಗಜ ಕಲಾವಿದರನ್ನು ಕಳೆದುಕೊಂಡು ಸಂದಿಗ್ಧತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಶ್ರಮಿಸಿದ ಕಲಾವಿದರು, ತಂತ್ರಜ್ಞರು, ಬರಹಗಾರರನ್ನು ನೆನಪಿಸಿಕೊಂಡರು.

ಫಿಲ್ಮ್ ಸೊಸೈಟಿ ಅಗತ್ಯ: ಸಮಾನಮನಸ್ಕರು ಸೇರಿಕೊಂಡು ಎಲ್ಲೆಡೆ ಫಿಲ್ಮ್ ಸೊಸೈಟಿಗಳನ್ನು ಸ್ಥಾಪಿಸುವ ಮೂಲಕ ಕನ್ನಡ ಚಿತ್ರೋದ್ಯಮದ ಪ್ರಗತಿಗೆ ಕೈಜೋಡಿಸಬೇಕು ಎಂದು ಡಾ.ಜಯಮಾಲಾ ಕರೆ ನೀಡಿದರು. ಭಾಷೆ ಸತ್ತರೆ ಮನುಷ್ಯ ಸತ್ತಂತೆ. ಕನ್ನಡ ಚಲನಚಿತ್ರದ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸಿದ ಉತ್ತರ ಕರ್ನಾಟಕ ಜನರ ಪ್ರೀತಿಗೆ ಇಡೀ ಉದ್ಯಮವೇ ಋಣಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬೆಳಗಾವಿಯಲ್ಲಿ ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರದರ್ಶನ ಕಷ್ಟಸಾಧ್ಯವಾಗಿತ್ತು. ಚಿತ್ರಮಂದಿರ ಮತ್ತು ಪ್ರೇಕ್ಷಕರ ಮೇಲೆ ಕಲ್ಲು ತೂರಾಟ ನಡೆದ ಪ್ರಸಂಗಗಳು ನಡೆಯುತ್ತಿದ್ದವು. ಅಂತಹ ಬೆಳಗಾವಿ ನಗರದಲ್ಲಿ ಇಂದು ಐದಾರು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು. ಬೆಂಗಳೂರು ಕೇಂದ್ರೀಕೃತಗೊಂಡಿರುವ ಚಿತ್ರೋದ್ಯಮ ಉತ್ತರ ಕರ್ನಾಟಕ ಕಡೆಗೂ ಆಸಕ್ತಿ ತೋರಿಸಬೇಕು ಎಂದು ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಚಿತ್ರೋದ್ಯಮ, ಪ್ರದರ್ಶನ ಮತ್ತು ತಾಂತ್ರಿಕ ಬೆಳವಣಿಗೆಗೆ ಅಕಾಡೆಮಿಯು ಹಲವಾರು ರೀತಿಯಲ್ಲಿ ಶ್ರಮಿಸುತ್ತಿದೆ ಎಂದರು.

ಸದಭಿರುಚಿಯ ಚಿತ್ರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ಪ್ರಥಮ ಪ್ರಯತ್ನದಲ್ಲಿಯೇ ಉತ್ತಮ ಚಿತ್ರ ನಿರ್ಮಾಣ ಮಾಡಿದ ನಿರ್ದೇಶಕರಿಗೆ ಪ್ರೋತ್ಸಾಹಿಸಲು ಅವರ ಚಿತ್ರಗಳನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ವಿವೇಕ ಸಾವಜಿ, ಡಾ.ರಾಜಾಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ಸ್ವಾಗತಿಸಿದರು. ಚಿತ್ರೋತ್ಸವ ಸಂಚಾಲಕ ನಟರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News