ಕಾರ್ಮಿಕರ ಕಲ್ಯಾಣ ಮಂಡಳಿಯ 413 ಕೋಟಿ ರೂ. ವಾಪಸ್ ಪಡೆಯಲು ಕ್ರಮ: ಸಚಿವ ವೆಂಕಟರಮಣಪ್ಪ
Update: 2018-12-19 17:28 GMT
ಬೆಳಗಾವಿ, ಡಿ.19: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಆದಾಯ ತೆರಿಗೆ ಇಲಾಖೆಯು ಮಂಡಳಿಯಲ್ಲಿ ಸಂಗ್ರಹವಾಗಿದ್ದ ವಾರ್ಷಿಕ ಕಲ್ಯಾಣ ಸುಂಕ 413.08 ರೂ.ಕೋಟಿ ಮೊತ್ತವನ್ನು ಆದಾಯ ಎಂದು ತಪ್ಪಾಗಿ ಗ್ರಹಿಸಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಈ ಹಣವನ್ನು ವಾಪಸ್ ತರಿಸಿಕೊಳ್ಳಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಾರ್ಷಿಕ ಕಲ್ಯಾಣ ಸುಂಕ 413.08 ಕೋಟಿ ರೂ.ಗಳನ್ನು ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಮಕ್ಕಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಈ ಹಣವನ್ನು ವಾಪಸ್ ತರಲು ತೆರಿಗೆ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.