ಶಿಕ್ಷಕ ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕು: ಡಾ.ರಹಮತ್ ತರೀಕೆರೆ

Update: 2018-12-26 17:23 GMT

ಮಂಡ್ಯ, ಡಿ.26: ವಿದ್ಯಾರ್ಥಿಗಳನ್ನು ಶಿಕ್ಷಕ ನಾಗರಿಕ ಸಮಾಜಕ್ಕೆ ಅರ್ಪಿಸುವ ಕೆಲಸ ಮಾಡಬೇಕು. ಸಮುದಾಯದ ಪ್ರಜ್ಞೆಯನ್ನು ಮೂಡಿಸಬೇಕು. ಈ ಕೆಲಸ ಮಾಡಬೇಕಾದರೆ ಶಿಕ್ಷಕ ತನ್ನನ್ನು ತಾನು ಗುರುತಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಎದುರಾಗುವ ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕನಿಗೆ ಹೊಸ ಸವಾಲುಗಳು ಎದುರಾಗುತ್ತಿವೆ. ಶಿಕ್ಷಣ ಇಂದು ಸರಕಾಗಿದೆ. ವಿದ್ಯಾರ್ಥಿ ಗ್ರಾಹಕನಾಗಿ ಶಿಕ್ಷಕ ಅದನ್ನು ಒದಗಿಸುವ ಸಪ್ಲೈಯರ್ ನಂತಾಗಿದ್ದಾನೆ. ಜ್ಞಾನ ಇಂದು ಯಂತ್ರಗಳಿಂದಲೂ ಸಿಗುತ್ತಿದೆ. ಮಾಹಿತಿ ತುಂಬುವ ಬದಲಾಗಿ ಶಿಕ್ಷಕ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು.

ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಚಿಕಿತ್ಸಕ ಬುದ್ಧಿ ಬೆಳೆಸಬೇಕು. ಇದನ್ನು ಬೆಳೆಸುವುದು ಸಹ ಸುಲಭವೇನಲ್ಲ. ಶಿಕ್ಷಕ ಪ್ರವಾಹದ ವಿರುದ್ಧ ಈಜುವ ಕೆಲಸವನ್ನು ಮಾಡೇಕಾಗುತ್ತದೆ ಎಂಬುದೂ ಸತ್ಯ. ಆದರೂ ಆ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಒಂದು ಗಂಟೆ ಏಕಮುಖಿಯಾಗಿ ಬೋಧಿಸುವುದು ಮಾತ್ರ ಶಿಕ್ಷಕನ ಕೆಲಸವಲ್ಲ. ಮಾತು ಕೇಂದ್ರಿತವಾದ ತರಗತಿಗಳನ್ನು ಶಬ್ಧ, ಚಿತ್ರ, ನಾದಗಳಿಂದ ತುಂಬಿದ ತರಗತಿಯನ್ನಾಗಿ ಮಾಡಬೇಕು. ಸಂವಾದದ ಸ್ಥಳವನ್ನಾಗಿಸಬೇಕು. ಸಮಾಜ ಒಳ್ಳೆಯ ವೈದ್ಯ, ವಕೀಲನನ್ನು ಹುಡುಕುವಂತೆ ಉತ್ತಮ ಶಿಕ್ಷಕನನ್ನು ಬಯಸುತ್ತಿದೆ. ಶಿಕ್ಷಕನಿಗೆ ತಾಂತ್ರಿಕ ಅರ್ಹತೆಗಿಂತ ನೈತಿಕ ಅರ್ಹತೆ ಇದೆಯೇ ಎಂಬುದನ್ನು ನೋಡಬೇಕು. ನಾವು ಕೆಟ್ಟರೆ ಸಮಾಜ ಕೆಡುವ ಅಪಾಯವಿದೆ. ಶಿಕ್ಷಕನಿಗೆ ತಾಯಿಯಾಗುವ, ಗೆಳೆಯನಾಗುವ ಲಕ್ಷಣ ಇದೆ. ಈ ಗುಣಗಳನ್ನು ಪಡೆದ ಶಿಕ್ಷಕ ಉತ್ತಮ ವಿದ್ಯಾರ್ಥಿಯನ್ನು ರೂಪಿಸಬಲ್ಲ ಎಂದು ಅವರು ತಿಳಿಸಿದರು.

"ವಿದ್ಯಾರ್ಥಿ ಬದುಕನ್ನು ರೂಪಿಸುವಲ್ಲಿ ಬೋಧನೆಯ ಪಾತ್ರ” ವಿಷಯ ಕುರಿತು ಪ್ರಧಾನ ಭಾಷಣ ಮಾಡಿದ ಸಾಹಿತ್ಯ ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ, ಶಿಕ್ಷಕ ಮೊದಲು ತಾನು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಸಾಧ್ಯ ಎಂದರು.

ಶಿಕಕ್ಷಕರು ಕೇವಲ ಮಾಹಿತಿ ಹಂಚುವ ವಕ್ತಾರರಾಗದೇ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಅವರಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಚ್.ನಿಂಗೇಗೌಡ, ಕಾರ್ಯಾಧ್ಯಕ್ಷರಾದ ಎಸ್.ಆರ್.ವೆಂಕಟೇಶ್, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಜಿ.ಆರ್.ಗೀತಾ ಮಾತನಾಡಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದ ಖಜಾಂಚಿ ಎನ್.ಜವರೇಗೌಡ, ಕರ್ನಾಟಕ ರಾಜ್ಯ ಪ.ಪೂ.ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಹನುಮಂತಯ್ಯ, ಕಾರ್ಯಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಮಂಜೇಶ್ ಕುಮಾರ್, ಖಜಾಂಚಿ ಶಿವಲಿಂಗಯ್ಯ, ಸಂಘಟನಾ ಕಾರ್ಯದರ್ಶಿ ಲಿಂಗೇಗೌಡ, ಪತ್ರಿಕಾ ಕಾರ್ಯದರ್ಶಿ ಹೊಳಲು ಶ್ರೀಧರ್, ಕೃಷ್ಣೇಗೌಡ, ಲಕ್ಷ್ಮೀಕಾಂತ್, ಸಿ.ಜೆ.ಕುಮಾರ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News