ಹೇಮಾವತಿ ನೀರಿನ ಬಳಕೆಯಲ್ಲಿ ಜನಪ್ರತಿನಿಧಿಗಳು ವಿಫಲ: ಮಾಜಿ ಸಚಿವ ಸೊಗಡು ಶಿವಣ್ಣ

Update: 2018-12-27 12:07 GMT

ತುಮಕೂರು,ಡಿ.27: ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದು, ಹೆಬ್ಬಾಕ, ಮೈದಾಳ ಕೆರೆಗಳಿಗೆ ನೀರನ್ನು ತುಂಬಿಸದೇ ಇದ್ದರೆ, ಪಕ್ಷ ರಹಿತವಾಗಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಹೇಮಾವತಿ ನೀರು ಸಂಗ್ರಹಿಸುವ ಬುಗುಡನಹಳ್ಳಿ, ಹೆಬ್ಬಾಕ ಕೆರೆಗಳಿಗೆ ಭೇಟಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಬ್ಬಾಕ ಕೆರೆ ನೀರು ತುಂಬಿಸುವುದಕ್ಕೆ ಜಿಲ್ಲಾಧಿಕಾರಿಗಳು ತಡೆ ನೀಡಿದ್ದಾರೆ. ಹೆಬ್ಬಾಕ ಕೆರೆಗೆ ನೀರು ತುಂಬಿಸಿದರೆ, ಮೂರು ತಿಂಗಳು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದರೊಂದಿಗೆ ಹೆಬ್ಬಾಕ ಸುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸಭೆಯಲ್ಲಿ ಹೇಮಾವತಿ ಇಂಜಿನಿಯರ್ ಹೆಬ್ಬಾಕ ಕೆರೆ ನೀರು ಸಂಗ್ರಹಕ್ಕೆ ಯೋಗ್ಯವಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಹೆಬ್ಬಾಕ ಕೆರೆ ತುಂಬಿದರೆ ರೈತರು ಎರಡು ಬೆಳೆ ಬೆಳೆಯುತ್ತಿದ್ದರು ಅಂದ ಮೇಲೆ ನೀರು ಎಲ್ಲಿ ಇಂಗುತ್ತದೆ. ಅವರಿಗೆ ತಲೆ ಇಲ್ಲ ಅನ್ನಿಸುತ್ತದೆ. ವಾಟರ್ ಮಾಫಿಯಾದೊಂದಿಗೆ ಸೇರಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಹೇಮಾವತಿ ಯೋಜನೆಯಲ್ಲಿ ತುಮಕೂರು ನಗರಕ್ಕೆ 1.131 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಆದರೆ ಇದುವರೆಗೆ ಅಷ್ಟು ನೀರನ್ನು ಪಡೆದುಕೊಳ್ಳಲು ಆಗಿಲ್ಲ. ನಮ್ಮ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳಲು ಯಾರ ಅಪ್ಪಣೆಯೂ ಬೇಕಾಗಿಲ್ಲ. ಹಂಚಿಕೆಯಾಗಿರೋ ನಮ್ಮ ಪಾಲಿನ ನೀರನ್ನು ಕೊಡುವುದಿಲ್ಲ ಎನ್ನಲು ಇವರು ಯಾರು ಎಂದು ಪ್ರಶ್ನಿಸಿದ ಅವರು, ನಮ್ಮ ಪಾಲಿನ ನೀರು ಪಡೆಯಲು ಯಾವುದೇ ತ್ಯಾಗಕ್ಕೂ ಸಿದ್ದ ಎಂದು ನುಡಿದರು.

ವಾಟರ್ ಮಾಫಿಯಾ: ಬುಗುಡನಹಳ್ಳಿ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರನ್ನು ತುಂಬಿಸಿಲ್ಲ. ಕಳೆದ ವರ್ಷ ನೀರಿಗಾಗಿ ಜನರು ಸಾಕಷ್ಟು ಪರದಾಟ ನಡೆಸಿದ್ದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ಈ ಬಾರಿಯೂ ನೀರನ್ನು ಸಂಗ್ರಹಿಸಲು ಮುಂದಾಗುತ್ತಿಲ್ಲ.. ವಾಟರ್ ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ ಎಂದ ಅವರು, ನೀರಿನ ವಿಚಾರದಲ್ಲಿ ರಾಜಕೀಯವನ್ನು ಮಾಡುವುದನ್ನು ಬಿಡದೇ ಇದ್ದರೆ ಸಿವಿಲ್ ದಂಗೆ ಆಗುತ್ತದೆ. ಜಿಲ್ಲಾ ಮಂತ್ರಿಗಳಿಗೆ ಸಾಮಾಜಿಕ ಬದ್ಧತೆ ಇಲ್ಲ ಎಂದರು.

ಪೈಪ್‍ಲೈನ್ ಕಾಮಗಾರಿ ಮಾಡಿಸಿ: ನಗರಕ್ಕೆ ನೀರು ಪೂರೈಕೆ ಮಾಡುವ ಮೈದಾಳ ಹಾಗೂ ದೇವರಾಯನಪಟ್ಟಣ ಕೆರೆಗೆ ಹೇಮಾವತಿ ನೀರನ್ನು ತುಂಬಿಸಿ, ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ಕಳೆದ 5 ವರ್ಷಗಳಿಂದ ನೆನೆಗುಂದಿಗೆ ಬಿದ್ದಿದೆ. ದಾಬಸ್‍ಪೇಟೆ ಮತ್ತು ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ಬುದ್ಧಿಭ್ರಮಣೆ ಆಗಿರಬೇಕು. 90 ಕೋಟಿ ರೂ.ಗಳನ್ನು ಕೆಐಎಡಿಬಿ ನೀಡಿದೆ. 15 ಎಂಡಿಎಲ್ ನೀರನ್ನು ಕೊಡುವುದರಲ್ಲಿ ಏನು ಸಮಸ್ಯೆ ಇದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳದೆ, ಸಮುದ್ರದ ಪಾಲಾಗುವುದನ್ನು ತಪ್ಪಿಸಿ, ನೀರನ್ನು ಸಂಗ್ರಹಿಸಿಕೊಳ್ಳುವುದರಲ್ಲಿ ತಪ್ಪೇನಿದೆ ? ನಗರ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಮೊದಲು ನಮ್ಮ ಪಾಲಿನ ನೀರನ್ನು ಪಡೆದುಕೊಳ್ಳುವುದರ ಕಡೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.ಈ ವೇಳೆ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಜಯಸಿಂಹ, ಕೆ.ಪಿ.ಮಹೇಶ್, ನರಸಿಂಹರಾಜ, ರೈತರು ಉಪಸ್ಥಿತರಿದ್ದರು.

ಬುಗುಡನಹಳ್ಳಿ ಕೆರೆ ಏರಿ ಬಿರುಕು
ಹೇಮಾವತಿ ನೀರನ್ನು ಸಂಗ್ರಹಿಸುತ್ತಿರುವ ಬುಗುಡನಹಳ್ಳಿ ಕೆರೆ ಏರಿ ನಿರ್ವಹಣೆ ಇಲ್ಲದೇ ಬಿರುಕು ಮೂಡಿದ್ದು, ಕೆಲವೆಡೆ ಮಾಳೆ ಬಿದ್ದಿದೆ. ಕೆರೆ ಏರಿಯಲ್ಲಿ ಗಿಡ-ಮರಗಳು ಬೆಳೆದು ಹಾಳಾಗಿವೆ. 25 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕೆರೆ, ನಿರ್ವಹಣೆ ಇಲ್ಲದೆ ಹಾಳಾಗುವ ಹಂತದಲ್ಲಿದೆ. ನಗರ ಶಾಸಕರು, ಪಾಲಿಕೆ ಅಧಿಕಾರಿಗಳು, ನೀರು ಸರಬರಾಜು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ, ಮೀಟಿಂಗ್ ಎಂದು ಸಬೂಬು ಹೇಳುತ್ತಾರೆ. ಹೀಗೆ ಹೇಳುತ್ತಿದ್ದರೆ, ಜಿಲ್ಲಾಧಿಕಾರಿಗಳ ಸಭೆ ನಡೆಸುವಾಗಲೇ ಕಚೇರಿಗೆ ಬೀಗ ಹಾಕುತ್ತೇನೆ ಎಂದರು.
- ಸೊಗಡು ಶಿವಣ್ಣ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News