ಶ್ರೀರಾಮ ಕುಡುಕ, ಕೊಲೆಗಡುಕ: ವಿವಾದ ಸೃಷ್ಟಿಸಿದ ಪ್ರೊ.ಕೆ.ಎಸ್.ಭಗವಾನ್ ಪುಸ್ತಕ
ಮೈಸೂರು,ಡಿ.27: ಶ್ರೀರಾಮ ಸತ್ಯವಂತನಲ್ಲ, ಆತ ಕುಡುಕ ಮತ್ತು ಕೊಲೆಗಡುಕ. ರಾಮ ದೇವರೆ ಅಲ್ಲ, ಅವನಿಗೇಕೆ ಮಂದಿರ ಕಟ್ಟಬೇಕು ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಮ್ಮ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ರಾಮ ಮಂದಿರ ಏಕೆ ಬೇಡ? ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಹೊರಬಂದಿದ್ದು, ರಾಮನ ಕುರಿತು ಭಗವಾನ್ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮ ಮದ್ಯಪಾನ ಮಾಡುತ್ತಿದ್ದ, ಆತನ ಪತ್ನಿ ಸೀತೆಗೂ ಕೂಡ ಮದ್ಯ ಕುಡಿಸುತ್ತಿದ್ದ. ಯುವತಿಯರು ಮದ್ಯಪಾನ ಮಾಡಿ ರಾಮನ ಮುಂದೆ ನರ್ತಿಸುತ್ತಿದ್ದರು. ಹಾಗೆಯೇ, ರಾಮ ಮಾಂಸಹಾರಿ, ಇಂತಹವನಿಗೆ ರಾಮ ಮಂದಿರ ಕಟ್ಟಬೇಕೆ ಎಂದು ಪ್ರಶ್ನಿಸಿದ್ದಾರೆ.
ರಾಮ, ಕೃಷ್ಣ, ಶಿವ, ಚಂಡಿ, ಚೌಡಿ, ಚಾಮುಂಡಿ, ಮಾರಮ್ಮ, ತೂರಮ್ಮ, ಹಾರಮ್ಮ, ಕೇರಮ್ಮ ಇವರ್ಯಾರು ದೇವರೇ ಅಲ್ಲ. ಕಲ್ಲಿನ ಆಕಾರಗಳು. ಗುಜರಾತಿನ ಸೋಮನಾಥ ದೇವಾಲಯದ ಮೇಲೆ 18 ಬಾರಿ ದಾಳಿ ಆದಾಗ ಇವರೆಲ್ಲ ಏನು ಮಾಡುತ್ತಿದ್ದರು? ಮರದ ಮರೆಯಲಿ ಅವಿತುಕೊಂಡು ವಾಲಿಯನ್ನು ಕೊಂದ ರಾಮ ಸತ್ಯವಂತನಲ್ಲ, ವೀರನೂ ಅಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು, ಮಹಾತ್ಮಗಾಂಧಿ ಕುರಿತು ಬರೆದಿರುವ ಪ್ರೊ.ಭಗವಾನ್, ಮಹಾತ್ಮಗಾಂಧಿ ಒಬ್ಬ ಮತಾಂಧ, ಆತ ಮೂಲಭೂತವಾದಿ ಎಂದು ಉಲ್ಲೇಖಿಸಿದ್ದಾರೆ.