ಅಂಗನವಾಡಿ, ಶಾಲಾ ಬಿಸಿಯೂಟಕ್ಕೆ ಕಳಪೆ ಆಹಾರ ಧಾನ್ಯ ಪೂರೈಕೆ: ತರೀಕೆರೆ ತಾಪಂ ಅಧ್ಯಕ್ಷೆ ಪದ್ಮಾವತಿ ಆರೋಪ

Update: 2018-12-27 17:04 GMT

ತರೀಕೆರೆ, ಡಿ.27: ತಾಲೂಕಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು, ನಾಯಿ ಕಚ್ಚಿರುವುದಕ್ಕೆ ಔಷಧ ಲಭ್ಯವಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿರುವ ಬಗ್ಗೆ ದೂರುಗಳು ನಮಗೆ ಬಂದಿವೆ. ತಾಲೂಕು ಆರೋಗ್ಯಾಧಿಕಾರಿಗಳು ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‍ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಬೇಳೆ ಕಾಳುಗಳು ಹುಳ ಹಿಡಿದಿವೆ. ಶಿವನಿ ಮತ್ತು ರಂಗೇನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುಳ ಆಗಿರುವ ತೊಗರಿಬೇಳೆಯಲ್ಲಿಯೇ ಅಡುಗೆ ಮಾಡಲಾಗಿದೆ ಎಂದು ಸ್ಥಳೀಯರ ನೆರವಿನಿಂದ ವಿದ್ಯಾರ್ಥಿಗಳು ನನಗೆ ತಿಳಿಸಿದ್ದಾರೆ. ಬಿಸಿಯೂಟ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಅಧಿಕಾರಿಗಳು ಸಭೆಗಳಿಗೆ ಸಮಯಕ್ಕೆ  ಸರಿಯಾಗಿ ಬರುತ್ತಿಲ್ಲ. ಸಭೆಗೆ ನಾಮಕಾವಸ್ಥೆಗೆ ಬರುವಂತೆ ಕಾಣುತ್ತಿದೆ. ತಡವಾಗಿ ಸಭೆಗೆ ಬಂದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ತಿಂಗಳಲ್ಲಿ ನಡೆಯುವ ಒಂದು ಸಭೆಗೇ ಬಾರದಿದ್ದರೆ ಹೇಗೆಂದು ಪ್ರಶ್ನಿಸಿದ ಅವರು ಇದು ಪುನರಾವರ್ತನೆಯಾಗಬಾರದು ಎಂದು ಸೂಚಿಸಿದರು.

ಕಾಲುಬಾಯಿ ಜ್ವರದ ಲಸಿಕೆಯನ್ನು ಜನವರಿ ತಿಂಗಳಿನಲ್ಲಿ ಪ್ರಾರಂಭಿಸಲಾಗುವುದು. ರೈತರಿಗೆ ಮೇವಿನ ಕಿಟ್ ಮತ್ತು ಎರಡು ಸಾವಿರ ಗಿರಿರಾಜ ಕೋಳಿ ಮರಿಗಳನ್ನು ವಿತರಣೆ ಮಾಡಲಾಗಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹನುಮಂತನಾಯ್ಕ ಕಾರ್ಬಾರಿ ಸಭೆಗೆ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಟಿ.ಎನ್.ಚಿತ್ರಸೇನ ಮಾತನಾಡಿ, ಹುಣಸಘಟ್ಟ, ಅಜ್ಜಂಪುರ, ಲಕ್ಕವಳ್ಳಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ತಲಾ 50 ಲಕ್ಷ ರೂ. ಅನುದಾನ ನಿಗದಿಗೊಳಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದೇ ತಿಂಗಳು 29 ಮತ್ತು 30 ರಂದು ಚಿಕ್ಕಮಗಳೂರಿನ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ನಡೆಯುವ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮೇಳಕ್ಕೆ ತಾಲೂಕಿನಿಂದ ಸುಮಾರು 500 ರೈತರನ್ನು ಇಲಾಖೆಯ ವತಿಯಿಂದ ಕರೆದೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಮಧು ಮಾತನಾಡಿ, ಬಿಪಿಎಲ್ ಕಾರ್ಡು ಹೊಂದಿದವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಂಪೂರ್ಣ ಉಚಿತ ಸೌಲಭ್ಯ ದೊರಕಲಿದೆ ಎಂದರು. ಲಿಂಗದಹಳ್ಳಿ ಪ್ರಾಥಮಿಕ ಕೇಂದ್ರ ಜಿಲ್ಲೆಯಲ್ಲಿಯೇ ಉತ್ತಮ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರಥಮ ಸ್ಥಾನ ಪಡೆದಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.

ಇಒ ಎನ್.ಕೆ.ಶಿವರಾಜ್ ಮಾತನಾಡಿ, ಸೈಕಲ್ ವಿತರಣೆಗೆ ಸರಕಾರ ತಾತ್ಕಾಲಿಕ ತಡೆ ನೀಡಿದೆ ಎಂದರು. ಬಳಿಕ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಮಾತನಾಡಿ, ತಾಲೂಕಿನ ವಿವಿಧ ಕೆರೆಗಳಲ್ಲಿ 27 ಲಕ್ಷ ಮೀನಿನ ಮರಿ ಬಿಡುವ ಗುರಿ ಹೊಂದಲಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ತಾಪಂ ಮಂಜುಳಾ, ತಾ.ಪಂ.ಇಒ ಡಾ.ಎ.ಬಿ.ಪ್ರಭಾಕರ್ ಹಾಗೂ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News