ಬೀರೂರು: ಮಂಗಳೂರು ವಿವಿ ರೀಡರ್ ಸಂಬಂಧಿ ಮನೆ ಮೇಲೆ ಎಸಿಬಿ ದಾಳಿ

Update: 2018-12-28 16:53 GMT

ಚಿಕ್ಕಮಗಳೂರು, ಡಿ.28: ಮಂಗಳೂರು ಮಹಾವಿದ್ಯಾನಿಲಯದ ರೀಡರ್ ಡಿ.ಮಂಜುನಾಥಯ್ಯ ಅವರ, ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿರುವ ಮನೆಯ ಮೇಲೆ ಎಸಿಬಿ ಅಧಿಕಾರಿ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿದ್ದಾರೆಂಬ ದೂರಿನ ಮೇರೆಗೆ ಹಾಲಿ ಮಂಗಳೂರು ಸರಕಾರಿ ವಿವಿಯ ರೀಡರ್ ಡಿ.ಮಂಜುನಾಥಯ್ಯ ಅವರ ಸಹೋದರ ವಾಸ ವಿರುವ ಬೀರೂರು ಮನೆಯಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಉಡುಪಿ ನಗರಸಭೆಯ ಪೌರಾಯುಕ್ತ ಮತ್ತು ನಗರಾಭಿವೃದ್ಧಿ ಸಮಿತಿಯ ಆಯುಕ್ತರಾಗಿದ್ದ ಮಂಜುನಾಥಯ್ಯ ಸದ್ಯ ಮಂಗಳೂರು ವಿವಿಯಲ್ಲಿ ರೀಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬೀರೂರಿನವರಾದ ಅವರು ಇಲ್ಲಿಯೂ ಆಸ್ತಿ ಹೊಂದಿರಬಹುದು ಎನ್ನುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 6ಗಂಟೆಗೆ ಬೀರೂರು ಪಟ್ಟಣದ ನೆಹರೂ ನಗರದ ಶ್ರೀರಾಮ ಬನಶಂಕರಿ ದೇವಾಲಯ ರಸ್ತೆಯ ಅವರ ಮನೆಗೆ ವಾಹನಗಳಲ್ಲಿ ಆಗಮಸಿ ಮಧ್ಯಾಹ್ನ 12ರವರೆಗೂ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು.

ಎಸಿಬಿ ಅಧಿಕಾರಿಗಳು ಮನೆಯಲ್ಲಿದ್ದ ಅವರ ತಾಯಿ ಮತ್ತು ಸಹೋದರನಿಂದ ಮಾಹಿತಿ ಪಡೆದರು. ಮಂಗಳೂರು ಎಸಿಬಿ ಎಸ್ಪಿ ಶೃತಿ ಅವರ ನಿರ್ದೇಶನದಲ್ಲಿ ಚಿಕ್ಕಮಗಳೂರು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ನಾಗೇಶ ಶೆಟ್ಟಿ ಮತ್ತು ಉಡುಪಿಯ ಎಸಿಬಿ ಪೊಲೀಸ್ ಇನ್‍ಸ್ಪೆಕ್ಟರ್ ಜಯರಾಮೇಗೌಡ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News