ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ವಿಫಲ: ಸಚಿವ ಜಿ.ಟಿ.ದೇವೇಗೌಡ
ಬಳ್ಳಾರಿ, ಡಿ.29: ಶಿಕ್ಷಕರು ಇಂದು ಲಕ್ಷಾಂತರ ರೂ. ಸಂಬಳವನ್ನು ಪಡೆಯುತ್ತಾರೆ. ಆದರೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗಿದ್ದಾರೆ. ಇನ್ನು ಮುಂದೆ ಆದರೂ ನೀವು ಕಲಿತದ್ದನ್ನು ಮಕ್ಕಳಿಗೂ ಕಲಿಸಲು ಮುಂದಾಗಬೇಕೆಂದು ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ.
ಬಳ್ಳಾರಿಯ ಕನ್ನಡ ವಿವಿಯಲ್ಲಿ ಆಯೋಜಿಸಿದ್ದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಹುಡುಕಿಕೊಂಡು ಹೋಗುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದ್ದು, ಶಿಕ್ಷಕರೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ. ಶಿಕ್ಷಕರು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ತಾವು ಕೂಡ ಶಿಕ್ಷಣದ ಬಗ್ಗೆ ಹೆಚ್ಚಿನ ತರಬೇತಿ ಪಡೆದುಕೊಳ್ಳಬೇಕು. ಹೆಚ್ಚಿನ ವೇತನ ಬರುತ್ತದೆಯೆಂದು ಬರೀ ಹಣವನ್ನು ಲೆಕ್ಕ ಹಾಕುವುದರಲ್ಲಿಯೇ ಕಾಲ ಕಳೆಯಬಾರದು ಎಂದು ಕಿವಿಮಾತು ಹೇಳಿದರು.
ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಅಂಕಗಳ ಹಿಂದೆ ಬೆನ್ನು ಹತ್ತಿಸಿದ್ದಾರೆ. ಇದರಿಂದ, ಕಲೆ, ಸಾಹಿತ್ಯದ ಜ್ಞಾನ ಮರೆಯಾಗುತ್ತಿದೆ. ಅಲ್ಲದೆ, ಹೆಚ್ಚಿನ ಇಂಜಿನಿಯರ್ ಕಾಲೇಜುಗಳು ಬೇಕಾಗಿವೆ ಎಂದು ಸರಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಾರೆ. ಆದರೆ, ಇರುವ ಇಂಜಿನಿಯರ್ ಕಾಲೇಜುಗಳಿಗೆಯೇ ಮೂಲಭೂತ ಸೌಲಭ್ಯಗಳನ್ನು ನೀಡಲು ಆಗುತ್ತಿಲ್ಲ ಎಂದು ನುಡಿದರು.