ಹೊಸ ವರ್ಷಾಚರಣೆ ಮುಗಿಸಿ ಮರಳುವ ವೇಳೆ ಅಪಘಾತ: ಸ್ಥಳದಲ್ಲೇ ಮೂವರು ಮೃತ್ಯು
Update: 2019-01-02 14:25 GMT
ಬೆಂಗಳೂರು, ಜ.2: ಶರವೇಗವಾಗಿ ಸಾಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ನಡೆದಿದೆ ಎನ್ನಲಾಗಿದೆ.
ಆಂಧ್ರ ಪ್ರದೇಶ ರಾಜ್ಯದ ಪಶ್ಚಿಮ ಗೋದಾವರಿ ಮೂಲದ ಶ್ರೀನಾಥ್(40 ), ಶ್ರೀಲೇಖಾ(36 ), ಶ್ರೀಲತಾ(32 ) ಮೃತಪಟ್ಟವರೆಂದು ಪೊಲೀಸರು ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ಮೈಲಾಪುರ ಗೇಟ್ ಬಳಿ ಈ ಘಟನೆ ನಡೆದಿದ್ದು, ಹೊಸ ವರ್ಷಾಚರಣೆ ಮುಗಿಸಿ ಆಂಧ್ರದಿಂದ ಬೆಂಗಳೂರಿನ ವೈಟ್ಫೀಲ್ಡ್ಗೆ ಬರುವಾಗ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.