‘ಎಸ್ಟಿಪಿ ನಿರ್ಮಾಣ’ ಭೂಸ್ವಾಧೀನ ಕೈಬಿಡಲು ರೈತರ ಆಗ್ರಹ: ಸಮಗ್ರ ಅಧ್ಯಯನಕ್ಕೆ ಸಮಿತಿ ರಚನೆ; ಸತೀಶ್ ಜಾರಕಿಹೊಳಿ

Update: 2019-01-05 15:47 GMT

ಬೆಳಗಾವಿ, ಜ.5: ಹಲಗಾ ಬಳಿ ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿರುವ ಸ್ಥಳದಲ್ಲಿಯೇ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಯೋಜನೆ ಅನುಷ್ಠಾನ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ರೈತರು, ಶಾಸಕರನ್ನು ಒಳಗೊಂಡಂತೆ ಐದು ಜನರ ಸಮಿತಿ ರಚಿಸಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಕೇಂದ್ರ ಸರಕಾರ ಪುರಸ್ಕೃತ ಅಮೃತ ಯೋಜನೆಯಡಿ ಎಸ್‌ಟಿಪಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ರೈತರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿಯು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಮೃತ ಯೋಜನೆಯಡಿ ಒಳಚರಂಡಿ 156 ಕೋಟಿ ರೂ.ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಹಲಗಾ ಬಳಿಯ 19 ಎಕರೆ 8 ಗುಂಟೆ ಜಮೀನು ಸ್ವಾಧೀನಕ್ಕೆ 2013 ರಲ್ಲಿ ತೀರ್ಪು ನೀಡಲಾಗಿದೆ. ಅದರ ಪ್ರಕಾರ ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ರೈತರು ಹೈಕೋರ್ಟಿನ ಮೂಲಕ ತಡೆಯಾಜ್ಞೆ ತಂದ ಪರಿಣಾಮ ಕೆಲಸ ವಿಳಂಬವಾಗಿದೆ ಎಂದು ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ವಿವರಿಸಿದರು.

2017ರ ಫೆಬ್ರವರಿ 17ರಂದು ಆದೇಶ ನೀಡಿರುವ ನ್ಯಾಯಾಲಯವು ಭೂಸ್ವಾಧೀನ ಕ್ರಮಬದ್ಧಗೊಳಿಸಿ, ರೈತರ ಅರ್ಜಿ ವಜಾಗೊಳಿಸಲಾಗಿದೆ. ಒಮ್ಮೆ ಕ್ರಮಬದ್ಧವಾಗಿ ಭೂಸ್ವಾಧೀನದ ಬಳಿಕ ಹಿಂದಿರುಗಿಸುವುದಕ್ಕೆ ಅವಕಾಶವಿಲ್ಲ. ಆದರೆ, ದರ ನಿಗದಿ ಬಗ್ಗೆ ರೈತರ ಅಹವಾಲು ಸ್ವೀಕರಿಸಿ, ಸಭೆಯ ನಡಾವಳಿ ಕಳುಹಿಸಲು ಸರಕಾರದ ನಿರ್ದೇಶನವಿದೆ ಎಂದು ಅವರು ಹೇಳಿದರು.

ಭೂಸ್ವಾಧೀನ ಕೈಬಿಡಲು ಆಗ್ರಹ: ಜಮೀನು ನೀಡಲು ನಾವು ಸಿದ್ಧರಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಗೆ ನಮ್ಮ ಭೂಮಿ ಕೊಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ನೀರಾವರಿ ಜಮೀನು ಇರುವುದರಿಂದ ಇದನ್ನು ಬಿಟ್ಟುಕೊಟ್ಟರೆ ತೀವ್ರ ತೊಂದರೆಯಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು. ಸುವರ್ಣ ವಿಧಾನಸೌಧ, ರಾಷ್ಟ್ರೀಯ ಹೆದ್ದಾರಿ ಮತ್ತಿತರ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಜಮೀನು ನೀಡಿರುವುದರಿಂದ ಹಲಗಾ ಹೊರತುಪಡಿಸಿ, ಬೇರೆ ಕಡೆ ಸರಕಾರಿ ಭೂಮಿ ಇರುವ ಕಡೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಅಹವಾಲು ಸಲ್ಲಿಸಿದರು.

ಯಾವ ಆಧಾರದ ಮೇಲೆ ಅಲಾರವಾಡ ಬದಲು ಹಲಗಾ ಗ್ರಾಮದ ಬಳಿ ಎಸ್ ಟಿಪಿ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು, ತಾಂತ್ರಿಕ ತಂಡವು ಪರಿಶೀಲನೆ ನಡೆಸಿ ಅಲಾರವಾಡ ಬದಲು ಹಲಗಾ ಸೂಕ್ತ ಎಂದು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಾಸಕ ಅಭಯ್ ಪಾಟೀಲ್ ಮಾತನಾಡಿ, ಹಲಗಾ ಹೊರತುಪಡಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಖಾಲಿ ಇರುವ ಆರು ಎಕರೆ ಜಮೀನು ಎಸ್‌ಟಿಪಿ ನಿರ್ಮಾಣಕ್ಕೆ ಸೂಕ್ತ ಇರುವ ಬಗ್ಗೆ ತಾಂತ್ರಿಕ ವರದಿ ನೀಡಿದರೆ ತಾವು ಭೂಸ್ವಾಧೀನಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ಯೋಜನೆ ಅನುಷ್ಠಾನ ಮತ್ತು ಭೂಸ್ವಾಧೀನ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಐದು ಜನರ ಸಮಿತಿ ರಚಿಸುವಂತೆ ಸಂಸದ ಪ್ರಕಾಶ್ ಹುಕ್ಕೇರಿ ಸಲಹೆ ನೀಡಿದರು. ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮೇಯರ್ ಬಸಪ್ಪಚಿಕ್ಕಲದಿನ್ನಿ, ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿಪಂ ಸಿಇಒ ರಾಮಚಂದ್ರನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News