×
Ad

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಫೇಸ್ ಬುಕ್ ಮಳಿಗೆ !

Update: 2019-01-05 22:06 IST

ಧಾರವಾಡ, ಜ.5: ಆಧುನಿಕ ಯುಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಮಾಧ್ಯಮಗಳಲ್ಲಿ ಫೇಸ್ ಬುಕ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ದುರ್ಬಳಕೆ ಆಗುತ್ತಿದೆ ಎಂಬ ಆರೋಪ ಸಹ ಒಂದೇ ಸಮನೆ ಕೇಳಿಬರುತ್ತಿದೆ. ಇನ್ನೊಂದೆಡೆ ಯುವ ಸಮೂಹ ಇದಕ್ಕೆ ದಾಸ್ಯವಾಗಿ, ಸೃಜನಾತ್ಮಕತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಕೂಗು ಕೂಡ ಅಲ್ಲಲ್ಲಿ ಬರಲಾರಂಭಿಸಿದೆ.

ಹೀಗಾಗಿಯೇ ಫೇಸ್ ಬುಕ್ ಬರೆಯುವ ಬರಹವನ್ನು ಹಲವು ಮಂದಿ ಲಘುವಾಗಿ ಪರಿಗಣಿಸುತ್ತಾರೆ. ಆದರೆ, ಇದಕ್ಕೆ ವಿರುದ್ಧ ಎಂಬಂತೆ ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿನ ಪುಸ್ತಕ ಮಳಿಗೆಯಲ್ಲಿ ಫೇಸ್ ಬುಕ್ ಕಾವ್ಯದ ಮಹತ್ವವನ್ನು ಸಾರಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಫೇಸ್ ಬುಕ್ ಪುಸ್ತಕದಂಗಡಿ ವಿಭಿನ್ನವಾಗಿ ನಿಂತಿದ್ದು, ಮೊದಲ ನೋಟಕ್ಕೆ ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದೆ.

ಹೂವಯ್ಯನ ಬಳಗದವರು ಫೇಸ್ ಬುಕ್ ಬರಹದ ಕಥೆ, ಕವಿತೆ, ಕಾದಂಬರಿಗಳನ್ನೇ ಪುಸ್ತಕ ರೂಪದಲ್ಲಿ ಹೊರತಂದು, ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ. ಫೇಸ್ ಬುಕ್ ಸಾಹಿತ್ಯದಲ್ಲಿ ಗಟ್ಟಿತನ ಇಲ್ಲ ಎಂದು ಆಪಾದಿಸುವವರಿಗೆ ಇದು ಉತ್ತರವಾಗಿದ್ದು, ಸಾಹಿತ್ಯಾಸಕ್ತರಲ್ಲಿ ಬರಹದ ಪ್ರೇರಣೆ ನೀಡುತ್ತಿದೆ.

ಮಳಿಗೆಯಲ್ಲಿ ಬರಹಗಾರರ ಫೇಸ್ ಬುಕ್ ಪ್ರೊಫೈಲ್ ಹಾಕಿದ್ದು, ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ರಾಜ್‍ ಕುಮಾರ್ ಮಡಿವಾಳರ್, ಸುಗುರೇಶ್ ಹಿರೇಮಠ, ಸುರೇಶ್ ಎಲ್. ರಾಜಮಾನೆ, ಪ್ರಕಾಶ್ ಡಂಗಿ, ಸೇತುರಾಮ್ ಸೇರಿದಂತೆ ಹಲವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದ ಸಾಲುಗಳು ಪುಸ್ತಕ ರೂಪ ತಾಳಿದೆ. ಸಾಹಿತ್ಯಾಸಕ್ತರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಅಷ್ಟೇ ಅಲ್ಲ, ಹೂವಯ್ಯನ ಬಳಗದವರ ಕಾರ್ಯಕ್ಕೆ ಮಳಿಗೆಗೆ ಆಗಮಿಸಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಕೇವಲ ಅಪಪ್ರಚಾರ, ಪ್ರಚಾರಗಳಿಗೆ ಅಷ್ಟೇ ಸೀಮಿತ ಮಾಡಿಕೊಳ್ಳಲಾಗಿದೆ. ಆದರೆ, ನಾವು ಸಾಮಾಜಿಕ ಮಾಧ್ಯಮಗಳಾದ ಪೇಸ್ ಬುಕ್, ಟ್ವಿಟರ್ ಸೇರಿದಂತೆ ಮತ್ತಿತರೆಗಳನ್ನು ಭಿನ್ನವಾಗಿ ಬಳಸಿಕೊಳ್ಳುವವರನ್ನು ಗಮನಿಸಬೇಕು. ಅಲ್ಲದೆ, ಅವರ ಬರಹಗಳನ್ನು ಓದಬೇಕು. ಆ ಮೂಲಕ ನಾವು ಕನಿಷ್ಠ ಮಟ್ಟದಲ್ಲಿಯಾದರೂ ಕೆಲವೊಂದಿಷ್ಟು ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಂಗಡಿಯ ಮಾಲಕ ಅಭಿಪ್ರಾಯಪಟ್ಟರು.

ನಾವು ಸುಮಾರು ದಿನಗಳಿಂದ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದವರನ್ನು ಗಮನಿಸುತ್ತಿದ್ದೆವು. ಅದನ್ನು ಓದುವ ಪ್ರತಿಕ್ರಿಯಿಸುವವರ ಕುರಿತು ನೋಡುತ್ತಿದ್ದೆವು. ಅದರಲ್ಲಿ ಬಹುತೇಕರು ಚೆನ್ನಾಗಿದೆ ಎಂದಷ್ಟೇ ಹೇಳುತ್ತಿದ್ದರು. ಹೀಗಾಗಿ, ನಾವು ಅಲ್ಲಿ ಬರೆಯುವಂತಹ ಎಲ್ಲರ ಬರಹವನ್ನು ಒಂದು ಪುಸ್ತಕ ಮಾಡಬೇಕು ಎಂದುಕೊಂಡು ಈ ಸಣ್ಣ ಪ್ರಯತ್ನ ಮಾಡಿದ್ದೇವೆ. ಆದರೆ, ಸಮ್ಮೇಳನದಲ್ಲಿ ಈ ಕುರಿತು ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ನಮಗೆ ಮತ್ತಷ್ಟು ಸ್ಪೂರ್ತಿಯನ್ನು ನೀಡಿದೆ. ಇದನ್ನು ಇನ್ನೂ ಮುಂದುವರಿಸುತ್ತೇವೆ ಎಂದು ಅಂಗಡಿಯ ಮಾಲಕರು ಹೇಳಿದರು.

ನಾನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟರ್ ನಂತಹವುಗಳಿಂದ ದೂರವಿದ್ದೇನೆ. ಅಲ್ಲಿ ಬರೀ ರಾಜಕೀಯ, ಪ್ರಚೋದನಕಾರಿ ವಿಷಯಗಳನ್ನು ಹೆಚ್ಚು ಹಂಚಲಾಗುತ್ತದೆ ಅಂದುಕೊಂಡಿದ್ದೆ. ಆದರೆ, ಕೇವಲ ಅಪಪ್ರಚಾರಕ್ಕೆ ಅಷ್ಟೇ ಅಲ್ಲ ಸಾಹಿತ್ಯಕ್ಕೂ ವೇದಿಕೆಯಾಗಿ ಬಳಕೆಯಾಗುತ್ತಿದೆ. ಎಲ್ಲರಿಗೂ ತಲುಪುವಲ್ಲಿ ಸಾಧ್ಯವಾಗದಂತಹ ಸಾಮಾಜಿಕ ಜಾಲತಾಣದ ಬರಹಗಳನ್ನು ಪುಸ್ತಕದ ರೂಪದಲ್ಲಿ ಓದುಗರಿಗೆ ಒದಗಿಸುತ್ತಿರುವುದು ಅತ್ಯುತ್ತಮ ಕೆಲಸ.

- ಶಾರದ, ಧಾರವಾಡ

ಫೇಸ್ ಬುಕ್ ಅನ್ನು ಬಳಸುವವರಿಗೆ ಅದೊಂದು ಅಸಹ್ಯ ಜಗತ್ತಿನಂತೆ ಕಾಣುತ್ತದೆ. ತಮ್ಮ ಸ್ವಹಿತಾಸಕ್ತಿಗಾಗಿ ಸುಳ್ಳುಗಳನ್ನು ಬಿತ್ತರಿಸುವ ಪ್ರಯತ್ನ ಅಲ್ಲಿ ಮಾಡುತ್ತಿರುತ್ತಾರೆ. ಅದರ ನಡುವೆಯೂ ಒಂದಷ್ಟು ಜನರಿಗಾದರೂ ನಾವು ಬರೆಯುವ ಲೇಖನ, ಕವನ, ಪದ್ಯ ತಲುಪಲಿ ಎಂಬ ಸದುದ್ದೇಶದಿಂದ ಬರುಯುವವರೂ ಇದ್ದಾರೆ. ಆದರೆ, ಎಲ್ಲರೂ ಬರೆಯುವುದನ್ನು ನಾವು ನೋಡಲು, ಓದಲು ಆಗುವುದಿಲ್ಲ. ನಾನು ಸಮ್ಮೇಳನಕ್ಕೆ ಮೊದಲ ಬಾರಿ ಬಂದಿದ್ದೆ. ಕುತೂಹಲದಿಂದ ಎಲ್ಲ ಕಡೆ ಓಡಾಡುತ್ತಿದ್ದೆ. ಪುಸ್ತಕದ ಮೇಳದಲ್ಲಿ ಈ ವಿಶಿಷ್ಟವಾದ ಅಂಗಡಿ ಕಂಡಿತು. ಇಲ್ಲಿ ಬಂದು ವಿಚಾರಿಸಿದಾಗ ಫೇಸ್ ಬುಕ್ ನಲ್ಲಿ ಬರೆಯುವವರ ಬರಹದ ಪುಸ್ತಕಗಳಿವೆ ಎಂದರು. ನನಗೆ ಕುತೂಹಲ ಹೆಚ್ಚಿ, ಪುಸ್ತಕ ನೋಡಿದೆ, ತುಂಬಾ ಭಿನ್ನವಾಗಿತ್ತು. ನಾನೂ ಅದನ್ನು ಖರೀದಿಸಿದೆ. ಮತ್ತಷ್ಟು ಜನಕ್ಕೆ ಅದರ ಬಗ್ಗೆ ಹೇಳುವೆ.

-ರವಿ, ಹುಬ್ಬಳ್ಳಿ

ಪುಸ್ತಕ ಬರೆಯುವವರು ಅಂದರೆ ಒಬ್ಬ ವ್ಯಕ್ತಿ ಬರೆಯುತ್ತಾರೆ ಅಂತ ತಿಳಿದುಕೊಂಡಿದ್ದೆ. ಆದರೆ, ಈ ಅಂಗಡಿಯಲ್ಲಿ ಸುಮಾರು ಜನರು ಬರೆದಿದ್ದನ್ನು ಒಂದೇ ಪುಸ್ತಕದಲ್ಲಿ ಪ್ರಿಂಟ್ ಮಾಡಿದ್ದಾರೆ. ಇದು ನನಗೆ ಹೊಸದಾಗಿ ಕಂಡಿತು. ಈ ಪುಸ್ತಕ ಹೆಚ್ಚು ಆಕರ್ಷಣೀಯವಾಗಿದೆ ಎಂದು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು ಮಾತನಾಡಿಕೊಳ್ಳುತ್ತಿದ್ದರು.

Writer - -ಬಾಬುರೆಡ್ಡಿ, ಚಿಂತಾಮಣಿ

contributor

Editor - -ಬಾಬುರೆಡ್ಡಿ, ಚಿಂತಾಮಣಿ

contributor

Similar News