ಮಹಿಳಾ ವೇದನೆಗೆ ಧ್ವನಿಯಾದ ಸಾಹಿತ್ಯ ಸಮ್ಮೇಳನ

Update: 2019-01-06 16:55 GMT

ಧಾರವಾಡ, ಜ.7: ಸನಾತನವಾದಿಗಳ ಅಟ್ಟಹಾಸ, ಧಾರವಾಡದ ಮಣ್ಣಿನ ಸೊಗಡು, ಮಹಿಳೆಯರ ವೇದನೆ, ಅತ್ಯಾಚಾರ, ಅಮಾಯಕರ ಬಲಿ ಸೇರಿದಂತೆ ಹಲವು ವಿಷಯಗಳಿಂದು ಚರ್ಚಿತವಾದವು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 84 ನೆ ಅಖಿಲ ಭಾರ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಪತ್ರಕರ್ತ ಹಾಗೂ ಕವಿ ಬಿ.ಎಂ.ಹನೀಫ್, ನಾನು ಕವಿಯಲ್ಲ, ದೇವರಾಣೆಗೂ ನಾನು ಕವಿಯಲ್ಲ. ಅಲ್ಲೊಂದಿಷ್ಟು ಕೆರೆದು, ಇಲ್ಲೊಂದಿಷ್ಟು ಬರೆದು ತಿಂದುಂಡು ಸುಖವಾಗಿರುವ ನಾನು ಕವಿಯಾಗಲು ಹೇಗೆ ಸಾಧ್ಯಎನ್ನುತ್ತಾ ಆರಂಭಿಸಿದ ಅವರು, ಧಾರವಾಡದ ಯಾರ ಮನೆ ಮೇಲೆ ಕಲ್ಲೆಸದರೂ ಕವಿ ಸಿಗುತ್ತಾನೆ ಎನ್ನುತ್ತಾರೆ. ಮುಸ್ಲಿಮ್‌ರ ಮೇಲಿನ ದೌರ್ಜನ್ಯ, ಸನಾತನವಾದಿಗಳು ಕಲಬುರ್ಗಿ ಕೊಲೆ ಮಾಡಿದ ಕ್ರೂರತೆಯನ್ನು ಪ್ರಶ್ನಿಸದಿದ್ದರೆ ಕವಿಯಾಗಲು ಹೇಗೆ ಸಾಧ್ಯ. ಗಾಂಧಿ ಕನ್ನಡಕ ಕದ್ದವರು ಸ್ವಚ್ಛಭಾರತ್ ಬಗ್ಗೆ ಮಾತನಾಡುತ್ತಿದ್ದಾರೆ, ಗೋಡ್ಸೆ ಹೆಗಲು ಮೇಲೆ ಕೈಯಿಟ್ಟವರು ಮುಗುಳ್ನತೆಯುತ್ತಾ ಸ್ವರ್ಗ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ಇದೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡು ಬರೆಯದಿದ್ದರೆ ಕವಿಯಾಗಲು ಹೇಗೆ ಸಾಧ್ಯ ಎಂದು ಕವಿತೆಯ ಮೂಲಕ ಪ್ರಶ್ನಿಸಿದರು.

ಜಿ.ಎಚ್.ಹನ್ನೆರಡು ಮಠ ಅವರ ಬೆಣ್ಣೆ ರೊಟ್ಟಿ ಕೆಂಪು ಕಾರ ಹೊಟ್ಟೆ ತುಂಬಾ ಉಣ್ಣು ಬಾರ, ಹುಂಡಿ ಪಲ್ಯ,ಮ ಹೊಣ್ಣೆ ಶಾಯಿ ಕುಸಿರಿ ಎಣ್ಣೆ ಸವಿಬಾಎಂಬ ಕವನದ ಮೂಲಕ ಧಾರವಾಡದ ಆಹಾರ ಪದ್ಧತಿಗಳ ಕುರಿತು ಕಟ್ಟಿಕೊಟ್ಟಿದ್ದರು. ಡಾ.ಪ್ರಜ್ಞಾಮತ್ತಿಹಳ್ಳಿ ಬೇಡಾ ಇಷ್ಟು ಬೇಡ, ಬೇಡವೇ ಎಂದು ಕೇಳದೇ ಪಾರ್ಲರ್‌ನಲ್ಲಿ ತಿಕ್ಕಿ, ತೀಡಿ ನುಣ್ಣಗೆ ಮಾಡಿದ್ದಾರೆ ಮಗಳುಎಂಬ ಕವನದ ಮೂಲಕ ಮಹಿಳೆಯರ ಸೌಂದರ್ಯದ ವರ್ಣನೆ ಹಾಗೂ ಅವಲಂಭನೆ ಕುರಿತು ವ್ಯಂಗವಾಗಿ ಕವಿತೆ ವಾಚಿಸಿದರು.

ಕವಿ ಡಾ.ಲಿಂಗಣ್ಣ ಗೋನಾಲ ಅವರು, ಕರೆದರು ಬನ್ನಿ ನೀವೆಲ್ಲರೂ ನಮ್ಮ ಗೃಹ ಪ್ರವೇಶಕ್ಕೆ, ಸ್ನೇಹಿತರು, ಸಂಬಂಧಿಕರು ಸೇರಿದರುಎಂಬ ಕವಿತೆಯ ಮೂಲಕ ಸಮಾಜದಲ್ಲಿನ ಜಾತೀಯತೆಯ ಕ್ರೂರತೆಯನ್ನು ತೆರೆದಿಟ್ಟರು ಹಾಗೂ ಮನೆಗಳಲ್ಲಿನ ಮಹಿಳೆಯರ ನಡುವೆ ಜಾತೀಯತೆಯ ಮನಸ್ಥಿತಿಯನ್ನು ಕವಿತೆಯ ಮೂಲಕ ತೋರಿಸಿಕೊಟ್ಟರು. ಇನ್ನು ನಿರ್ಮಲಾ ಎಡಿಗಾರ್ ಅವರ ನಾನು ಹುಟ್ಟಿದ ಮಣ್ಣ ಹಂಗ, ಇಲ್ಲಿವೆ ಬೆವರಿನ ಹಸಿರು, ಜ್ಞಾನದ ಹಸಿವು. ಇದು ಸಾಹಿತ್ಯ ಅಂದರೆ ಏನು ಅಂತದೆಎಂಬ ಕವನದ ಮೂಲಕ ನಮ್ಮ ನಾಡಿನ ಮಣ್ಣು ಸಾಹಿತ್ಯ, ಸಂಗೀತ, ಅಕ್ಷರಗಳು ಹಾಗೆಂದರೇನು ಎಂದು ಕೇಳುತ್ತವೆ. ತಮ್ಮ ಕವಿತೆಯ ಮೂಲಕ ಧಾರವಾಡದ ಪ್ರಮುಖ ಸಾಹಿತಿಗಳು, ಕವಿಗಳನ್ನು ಪರಿಚಯ ಮಾಡಿಕೊಟ್ಟರು. ಬೇಂದ್ರೆ, ಗೋಕಾಕ್, ಕಾರ್ನಾಡ್, ಚೆನ್ನವೀರ ಕಣವಿ, ಚಂದ್ರಶೇಖರ್ ಕಂಬಾರ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗಶೆಟ್ರು ಸೇರಿದಂತೆ ಅನೇಕರನ್ನು ನೆನೆದರು. ಜತೆಗೆ ಇಲ್ಲಿನ ಆಹಾರ ಪದ್ಧತಿಯನ್ನು ನೆನಪಿಸಿದರು.

ಇನ್ನುಳಿದಂತೆ ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ತಮ್ಮ ಹೇಳುವುದಾದರೂ ಹೇಗೆಎಂಬ ಕವನದ ಮೂಲಕ ಮಹಿಳೆಯ ಮೇಲಿನ ದೌರ್ಜನ್ಯ, ಶೋಷಣೆ ಕುರಿತು ಬೆಳಕು ಚೆಲ್ಲಿದರು. ಈ ನಾಡಿನಲ್ಲಿ ಅದೇಷ್ಟೋ ಹೆಣ್ಣುಗಳ ರಕ್ತ ಹರಿದಿದೆ, ದಾಸವಾಳದ ಹೂ ಅನ್ನೇ ಕೆಂಪಾಗಿಸಿದೆ ಎನ್ನುವ ಮೂಲಕ ಅತ್ಯಾಚಾರದ ವಿರುದ್ಧ ಆಕ್ರೋಶಭರಿತಗೊಂಡರು. ಕೊನೆಯದಾಗಿ ಕೈ ಕೈ ಹಿಡಿದು ಹೆಣ್ಣುಗಳು ಮೆರವಣಿಗೆ ಹೊರಡುತ್ತೇವೆ. ಪ್ರೀತಿ ಚಿತ್ತಾರಗಳನ್ನು ಬಿಡಿಸುತ್ತೇವೆ. ನಿಮ್ಮ ಹಳದಿ, ಕೆಂಪು ಎಲ್ಲ ಭಾವುಟಗಳೂ ನಿಮ್ಮಲ್ಲಿಯೇ ಇರಲಿ ಎನ್ನುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದು ಎಲ್ಲರ ಮೆಚ್ಚುಗೆ ಪಡೆಯಿತು.

ಕವಿಗೋಷ್ಠಿಯಲ್ಲಿ ಬಸವರಾಜ ಸೂಳಿಭಾವಿ, ವಿ.ಎಸ್.ಶಾನುಭೋಗ, ಆಲೂರು ದೊಡ್ಡನಿಂಗಪ್ಪ, ಟಿ.ಸತೀಶ್ ಜವರೇಗೌಡ, ಚಿದಾನಂದ ಸಾಲಿ ಸೇರಿದಂತೆ 27 ಜನ ಕವಿತೆ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News