‘ಕ್ರಾಂತಿ’ಯಾದರೂ ನಾವು ಇಲ್ಲೇ ಇರ್ತೀವಿ: ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ

Update: 2019-01-11 13:17 GMT

ಬೆಳಗಾವಿ, ಜ. 11: ‘ಸಂಕ್ರಾಂತಿ ನಂತರ ಕ್ರಾಂತಿಯಾದರೆ, ಆಗಲಿ ಬಿಡಿ. ಕ್ರಾಂತಿಯಾದರೆ ರಾಜ್ಯವೂ ಇಲ್ಲೇ ಇರುತ್ತೆ, ದೇಶವೂ ಇಲ್ಲೇ ಇರುತ್ತದೆ. ನಾವೂ ಇಲ್ಲೇ ಇರ್ತೀವಿ, ಅದೆಲ್ಲವೂ ಆಗುತ್ತಲೇ ಇರುತ್ತದೆ’ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ತಮ್ಮದೆ ದಾಟಿಯಲ್ಲಿ ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮದೇನಿದ್ದರೂ ರಾಜ್ಯದ ಅಭಿವೃದ್ಧಿ ಮತ್ತು ಇಲಾಖೆ ಕಾರ್ಯ ಚಟುವಟಿಕೆಗಳ ಬಗ್ಗೆ ಅಷ್ಟೇ ನಿಗಾ. ಆಪರೇಷನ್ ಕಮಲದ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿನ ಅರಣ್ಯ ರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆಸ್ಥೆ ವಹಿಸಿದ್ದು, ಅರಣ್ಯ ಪ್ರದೇಶದಲ್ಲಿನ ಜನರಿಗೆ ಕಾನೂನು ಬದ್ಧವಾಗಿ ಹಕ್ಕುಪತ್ರ ವಿತರಣೆಗೆ ಸೂಚನೆ ನೀಡಲಾಗಿದೆ ಎಂದ ಸತೀಶ್‌ಸ ಜಾರಕಿಹೊಳಿ, ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದು ನಮ್ಮ ಇಚ್ಛೆ ಎಂದರು.

ವೆೆುತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಪ್ರಯತ್ನಿಸುವುದು ಸ್ವಾಭಾವಿಕ. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಆದರೆ, ಇದನ್ನೆ ಅವರನ್ನು ದೂರುವುದು ಸರಿಯಲ್ಲ ಎಂದ ಅವರು, ಬಿಜೆಪಿಯವರು ಎಷ್ಟೇ ಆಮಿಷವೊಡ್ಡಿದರು ನಮ್ಮ ಪಕ್ಷದ ಯಾವೊಬ್ಬ ಶಾಸಕರು ಹೋಗುವುದಿಲ್ಲ ಎಂದರು.

ರಾಮಮಂದಿರ ಆಗಬಾರದೆಂದು ಯಾರೂ ವಿರೋಧ ಮಾಡಿಲ್ಲ. ರಾಮಮಂದಿರ ಬರೀ ಬಿಜೆಪಿ ಅವರದಷ್ಟೇ ಅಲ್ಲ. ಬಿಜೆಪಿಯವರು ಅದನ್ನ ಗುತ್ತಿಗೆ ಹಿಡಿದಿಲ್ಲ. ಎಲ್ಲರಿಗೂ ಅದರಲ್ಲಿ ಹಕ್ಕಿದೆ. ಆದರೆ, ಬಿಜೆಪಿ ಈ ವಿಚಾರವನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸತೀಶ್ ಜಾರಕಿಹೊಳಿ ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News