ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿರುವುದು ನನಗೆ ಗೊತ್ತಿದೆ: ಒಪ್ಪಿಕೊಂಡ ಸಿಎಂ ಕುಮಾರಸ್ವಾಮಿ

Update: 2019-01-14 15:00 GMT

ಮೈಸೂರು,ಜ.14: ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದ್ದು, ಬಿಜೆಪಿಯವರು ಯಾರ್ಯಾರನ್ನು ಸಂಪರ್ಕಿಸಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿರುವುದು ನನಗೆ ಗೊತ್ತಿದೆ. ಯಾರ್ಯಾರಿಗೆ ಯಾವ ಯಾವ ದೊಡ್ಡ ಉಡುಗೊರೆಗಳ ಆಮಿಷ ಒಡ್ಡಿದ್ದಾರೆಂಬುದು ಗೊತ್ತಿದೆ. ಅವರು ಆಪರೇಷನ್ ಕಮಲ ಮಾಡುತ್ತಿಲ್ಲ ಎಂಬುದರ ಬಗ್ಗೆ ಇನ್ನೂ ಏಕೆ ಅನುಮಾನ ಎಂದು ಪ್ರಶ್ನಿಸಿದರು.

ಎಲ್ಲವನ್ನು ನಾನು ಗಮನಿಸುತ್ತಿದ್ದೇನೆ. ಅವರ ಯಾವ ಪ್ರಯತ್ನವೂ ಈಡೇರುವುದಿಲ್ಲ ಎಂದ ಕುಮಾರಸ್ವಾಮಿ, ಮೂವರು ಶಾಸಕರು ಮುಂಬೈಗೆ ವೈಯಕ್ತಿಕ ಕೆಲಸದ ಕಾರಣಕ್ಕೆ ಹೋಗಿದ್ದಾರೆ. ಮೂವರು ನನ್ನ ಸಂಪರ್ಕದಲ್ಲಿದ್ದಾರೆ. ಬೆಳಗ್ಗೆ ಕೂಡ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತದೆ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರು ಯಾಕೆ ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೊ ನನಗೆ ಗೊತ್ತಿಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಜನರಿಗೆ ಏನು ಸಿಗುತ್ತದೊ ಗೊತ್ತಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಶ್ರೀಗಳು ಪವಾಡಪುರುಷರು, ಅವರ ಆರೋಗ್ಯದಲ್ಲಿ ಏರುಪೇರು ಇರೋದು ಸತ್ಯ. ಸರ್ಕಾರ ಕೂಡ ನಿತ್ಯ ಶ್ರೀಗಳ ಆರೋಗ್ಯದ ಸ್ಥಿತಿಗತಿಗಳನ್ನು ಗಮನಿಸುತ್ತಿದೆ. ವಯಸ್ಸಿನ ಕಾರಣದಿಂದ ಈ ರೀತಿ ಸಮಸ್ಯೆ ಅಗೋದು ಸಹಜ. ಐದು ಮಂದಿ ನುರಿತ ವೈದ್ಯರ ತಂಡ ಕ್ಷಣ ಕ್ಷಣಕ್ಕೂ ಅವರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಶ್ರೀಗಳು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News