ಶಿವಮೊಗ್ಗ: ಪುತ್ರಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

Update: 2019-01-14 17:03 GMT

ಶಿವಮೊಗ್ಗ, ಜ.14: ಪುತ್ರಿಯನ್ನು ಕೊಂದ ನಂತರ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಸುರೇಂದ್ರಗೌಡ ಕ್ಯಾಂಪ್‍ನಲ್ಲಿ ರವಿವಾರ ನಡೆದಿದೆ. 

ಶಂಕರ್ (45) ಹಾಗೂ ಪುತ್ರಿ ಭೂಮಿಕಾ (5) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರ ಪತ್ನಿ ಹಾಗೂ ಪುತ್ರ ಕಾರ್ಯನಿಮಿತ್ತ ಮನೆಯಿಂದ ಹೊರತೆರಳಿದ್ದ ವೇಳೆ, ಶಂಕರ್ ಪುತ್ರಿಯನ್ನು ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ. ನಂತರ ತಾನು ಕೂಡ ನೇಣಿಗೆ ಕೊರಳಿಡ್ಡಿದ್ದಾನೆ. ಪತ್ನಿ ಮನೆಗೆ ಆಗಮಿಸಿದಾಗ ದುರಂತ ಬೆಳಕಿಗೆ ಬಂದಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶಂಕರ್ ಕುಟುಂಬವು ಮೂಲತಃ ತಮಿಳುನಾಡು ರಾಜ್ಯದವರಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಬಂದು ಸುರೇಂದ್ರಗೌಡ ಕ್ಯಾಂಪ್‍ನಲ್ಲಿ ನೆಲೆಸಿದ್ದರು. ಶಂಕರ್ ರವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕಾರಣದಿಂದ ಪತ್ನಿ ಹಾಗೂ ಪುತ್ರ ಕೆಲಸಕ್ಕೆ ತೆರಳುತ್ತಿದ್ದರು. ಹಣಕಾಸಿನ ಸಮಸ್ಯೆ ಹಿನ್ನೆಲೆಯಲ್ಲಿ ಶಂಕರ್ ಪುತ್ರಿಯ ಹತ್ಯೆ ನಡೆಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ತಿಳಿದುಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News