ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಜ.18ರಂದು ಚಾಲನೆ: ಸಚಿವ ಎನ್.ಎಚ್.ಶಿವಶಂಕರರೆಡ್ಡಿ

Update: 2019-01-17 17:04 GMT

ಬೆಂಗಳೂರು, ಜ.17: ಸಿರಿಧಾನ್ಯಗಳು ನಮಗೆ, ನಮ್ಮ ರೈತರಿಗೆ ಹಾಗೂ ನಮ್ಮ ಭೂಮಿಗೆ ಎಷ್ಟು ಉತ್ತಮವಾದದ್ದು ಎಂಬುದನ್ನು ಸಾರುವ ಪ್ರಮುಖ ಹೆಜ್ಜೆಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಜ.18ರಿಂದ 20ರವರೆಗೆ ‘ಸಾವಯವ ಮತ್ತು ಸಿರಿಧಾನ್ಯಗಳು-2019’ ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಗುರುವಾರ ತ್ರಿಪುರ ವಾಸಿನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.18ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಮೇಳವನ್ನು ಉದ್ಘಾಟಿಸಲಿದ್ದು, ಕೇಂದ್ರ ಸರಕಾರದ ಸಚಿವರು ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವಾಣಿಜ್ಯ ಮೇಳದಲ್ಲಿ ಒಟ್ಟು 400 ಮಳಿಗೆಗಳು ಒಳಗೊಂಡಂತೆ 220 ಪ್ರದರ್ಶಕರು ಹಾಗೂ 23 ಆಹಾರ ಮಳಿಗೆಗಳು ಸೇರಿದಂತೆ ಒಟ್ಟು 243 ಪ್ರದರ್ಶಕರು ಭಾಗವಹಿಸಲಿದ್ದಾರೆ. ಛತ್ರೀಸ್‌ಗಡ, ಒಡಿಶಾ, ಉತ್ತರಾಖಂಡ್, ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಮಣಿಪುರ, ಕೇರಳ ಮತ್ತು ತೆಲಂಗಾಣ ರಾಜ್ಯದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅಲ್ಲದೇ, ಚಿಲಿ, ಪೋಲ್ಯಾಂಡ್, ಶ್ರೀಲಂಕಾ, ಬುರ್ಕಿನಾ ಫುಸೋ, ಯುಎಇ, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್ ದೇಶಗಳು ಈ ವಾಣಿಜ್ಯ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 16 ನವೋದ್ಯಮ ಸಂಸ್ಥೆಗಳು ಭಾಗವಹಿಸಲಿವೆ. ಈ ಮೇಳದಲ್ಲಿ ಐದು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ 23 ಸಾವಯವ ಮತ್ತು ಸಿರಿಧಾನ್ಯ ಖಾದ್ಯಗಳ ಮಳಿಗೆಗಳು ಇರುತ್ತವೆ ಎಂದು ಶಿವಶಂಕರರೆಡ್ಡಿ ತಿಳಿಸಿದರು.

ಈ ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳವು ಭಾರತದಲ್ಲಿಯೇ ಅತಿದೊಡ್ಡ ಕಾರ್ಯಕ್ರಮವಾಗಿದ್ದು, ಸಾವಯವ ವಲಯ ಮತ್ತು ಸಿರಿಧಾನ್ಯ ಸಮುದಾಯದ ಸಮಾಗಮ, ಕಲಿಕೆ ಮತ್ತು ವ್ಯಾಪಾರಕ್ಕೆ ವೃತ್ತಿಪರ ವೇದಿಕೆಯನ್ನು ಕಲ್ಪಿಸಲಿದೆ. ರಾಜ್ಯದ 60 ಮಳಿಗೆಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ರೈತರ ಒಕ್ಕೂಟಗಳು, ರೈತರ ಉತ್ಪಾದಕ ಸಂಸ್ಥೆಗಳ ಮತ್ತು ರಾಜ್ಯದ ವಿವಿಧ ಸಾವಯವ ಮತ್ತು ಸಿರಿಧಾನ್ಯ ಗುಂಪುಗಳ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಹೇಳಿದರು.

15 ಪ್ರಾದೇಶಿಕ ಒಕ್ಕೂಟಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ರೈತರ ಗುಂಪುಗಳನ್ನು ಪ್ರತಿನಿಧಿಸುವ 85 ರೈತರ ಗುಂಪುಗಳು ಭಾಗವಹಿಸಲಿವೆ. ಇದಲ್ಲದೆ, ಮೂರು ದಿನಗಳ ಕಾಲ ರೈತರಿಗಾಗಿ ಪ್ರತ್ಯೇಕವಾಗಿ ಕನ್ನಡದಲ್ಲಿ ರೈತರ ಕಾರ್ಯಾಗಾರಗಳನ್ನು ನಾಲ್ಕು ಅಧಿವೇಶನದಲ್ಲಿ ಆಯೋಜಿಸಲಾಗಿದ್ದು, 29 ಮಂದಿ ಉಪನ್ಯಾಸ ನೀಡಲಿದ್ದಾರೆ ಎಂದು ಶಿವಶಂಕರರೆಡ್ಡಿ ತಿಳಿಸಿದರು.

ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ಸ್ಪರ್ಧೆಯನ್ನು ಎರಡು ವಿವಿಧ ವರ್ಗಗಳಲ್ಲಿ ನಡೆಸಲಾಗುವುದು. ರಾಜ್ಯಮಟ್ಟದ ಒಕ್ಕೂಟವನ್ನು ರಚಿಸಿ, ಸಿರಿಧಾನ್ಯಗಳ ಮಾರಾಟಕ್ಕೆ ಅಗತ್ಯವಿರುವ ಮಾರಾಟ ಜಾಲ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಕೆಎಂಎಫ್‌ನ ನಂದಿನಿ ಔಟ್‌ಲೆಟ್‌ಗಳು ಹಾಗೂ ಹಾಪ್‌ಕಾಮ್ಸ್‌ಗಳಲ್ಲಿ ಸಿರಿಧಾನ್ಯಗಳನ್ನು ಮಾರಾಟ ಮಾಡುವ ಸಂಬಂಧ ಬಿಬಿಎಂಪಿ ಮೇಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಇನ್ನು 2-3 ತಿಂಗಳಲ್ಲಿ ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಶಿವಶಂಕರರೆಡ್ಡಿ ತಿಳಿಸಿದರು.

ಸಿರಿಧಾನ್ಯಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲು ಕನಿಷ್ಠ ಬೆಂಬಲ ಬೆಲೆ ಯೋಜನೆ ಪರಿಚಯಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ, ಮುಂದಿನ ಬಜೆಟ್‌ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆ ಆಯುಕ್ತ ಡಾ.ಕೆ.ಜಗದೀಶ್, ಇಕೋವಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಮೆನನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News