ಮೈಸೂರು: ಯುವತಿ ಅನುಮಾನಾಸ್ಪದ ಸಾವು; ಮರ್ಯಾದ ಹತ್ಯೆ ಶಂಕೆ

Update: 2019-01-18 17:16 GMT

ಮೈಸೂರು,ಜ.18: ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ನಂಜನಗೂಡಿನಲ್ಲಿ ಮತ್ತೊಂದು ಮರ್ಯಾದ ಹತ್ಯೆ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಕಾಳನಾಯಕ ಮತ್ತು ನಾಗಮ್ಮ ದಂಪತಿ ಪುತ್ರಿ ಸವಿತಾ(25) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ನಂಜನಗೂಡು ತಾಲೂಕು ಕೂಗಲೂರು ಮತ್ತು ಕಸುವಿನಹಳ್ಳಿ ಬಳಿ ಶವ ಪತ್ತೆಯಾಗಿದೆ. ಮುಖ್ಯ ರಸ್ತೆಯ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಈಕೆ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಬೆಂಗಳೂರಿನಲ್ಲಿ ನರ್ಸಿಂಗ್ ತರಬೇತಿ ಮಾಡಿದ್ದು, ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದಳು. ಕೂಗಲೂರು ಗ್ರಾಮದ ಗೌರಮ್ಮ ಅವರ ಪುತ್ರ ಶಂಕರ್ ಎಂಬ ಬೇರೆ ಜಾತಿಯ ಯುವಕನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಪ್ರೀತಿಗೆ ಜಾತಿ ಅಡ್ಡ ಬಂದ ಕಾರಣ ಮರ್ಯಾದೆ ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ನಂಜನಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News