ಓ ಮೆಣಸೇ…

Update: 2019-01-21 06:47 GMT

ಬಸವಣ್ಣ ಒಬ್ಬ ಅತಿದೊಡ್ಡ ಹಾಗೂ ಒಳ್ಳೆಯ ಹಿಂದೂ ಆಗಿದ್ದರು - ವಿಶ್ವೇಶ ತೀರ್ಥ ಸ್ವಾಮೀಜಿ,

ಪೇಜಾವರ ಮಠ ನಿಮ್ಮ ಮಠಗಳಲ್ಲಿ ಬಸವಣ್ಣನರ ವಚನಗಳನ್ನೇಕೆ ಪಠಿಸುವುದಿಲ್ಲ?

---------------------

ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂಬ ಕಪ್ಪುಚುಕ್ಕೆಯನ್ನು ಅಳಿಸುತ್ತೇನೆ - ದೇವೇಗೌಡ, ಮಾಜಿ ಪ್ರಧಾನಿ

ಅದು ಕುಮಾರಸ್ವಾಮಿಯ ಹಣೆಯ ಮೇಲಿರುವ ಚುಕ್ಕೆಯಲ್ಲ, ಮಚ್ಚೆಯಂತೆ.

---------------------

ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್ ಪಾಕಿಸ್ತಾನದ ನೆರವು ಬೇಡಿದೆ

- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

ನವಾಝ್ ಶರೀಫ್‌ನ್ನು ಗುಟ್ಟು ಗುಟ್ಟಾಗಿ ಮೋದಿಯವರು ಭೇಟಿಯಾಗಿದ್ದು ಯಾಕೆ?
---------------------

ಈ ಬಾರಿಯ ಲೋಕಸಭಾ ಚುನಾವಣೆ ಕುರುಕ್ಷೇತ್ರ ಇದ್ದಂತೆ - ಎ.ಕೆ.ಆ್ಯಂಟನಿ, ಮಾಜಿ ಕೇಂದ್ರ ಸಚಿವ

ದೇಶದ ಕಂಕುಳಲ್ಲಿ ಎದ್ದ ಕುರು ಇದು.

---------------------
ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಬಿಜೆಪಿ ಆಶಾಕಿರಣ - ನರೇಂದ್ರ ಮೋದಿ, ಪ್ರಧಾನಿ

ಹಳಬರಿಗೆ ಸತ್ಯ ಗೊತ್ತಾಗಿ ಬಿಟ್ಟಿದೆ.

---------------------

ಗೋಮಾಂಸ ಸೇವನೆ ಆರೋಗ್ಯಕ್ಕೆ ಹಾನಿಕರ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಬಿಜೆಪಿ ನಾಯಕರೆಲ್ಲ ಅನಾರೋಗ್ಯಕ್ಕೀಡಾಗುತ್ತಿರುವುದು ಗೋಮಾಂಸ ಸೇವನೆಯಿಂದ ಎಂದು ಹೇಳುತ್ತೀರಾ?

---------------------

(ಐಟಿ ದಾಳಿಯಲ್ಲಿ ) ನನ್ನಿಂದ ಚಿಕ್ಕ ಅಳಿಲಿನಷ್ಟು ತಪ್ಪಾಗಿದೆ - ಸುದೀಪ್, ನಟ

ತಮ್ಮದು ಅಳಿಲು ಸೇವೆ ಎಂದು ಗುರುತಿಸೋಣವೇ?

---------------------

ನಮ್ಮದು ‘ತಾಯಿ ಹೃದಯದ’ ಸರಕಾರ -ಕುಮಾರಸ್ವಾಮಿ, ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರು ಮಲತಾಯಿ ಇರಬೇಕು.

---------------------

ನಾರ್ಮಲ್ ಡೆಲಿವರಿ ಮಾಡಿ ಎಂದರೆ ಯಡಿಯೂರಪ್ಪ ಆಪರೇಶನ್ ಮಾಡಲು ಹೊರಟರು, ಆದರೆ ಈಗ ಗರ್ಭಪಾತವಾಗಿದೆ - ಸಿಎಂ.ಇಬ್ರಾಹೀಂ, ಕಾಂಗ್ರೆಸ್ ನಾಯಕ

ಮೊದಲು ತಮ್ಮ ಪಕ್ಷದೋರು ಪದೇ ಪದೇ ಗರ್ಭಿಣಿಯರಾಗುವುದನ್ನು ತಪ್ಪಿಸಿ.

---------------------

ಚುನಾವಣೆ ಎನ್ನುವುದು ಫಿಸಿಕ್ಸ್ ಅಲ್ಲ ಕೆಮೆಸ್ಟ್ರಿ - ಜೆ.ಪಿ.ನಡ್ಡಾ, ಬಿಜೆಪಿ ನಾಯಕ

ಆರೆಸ್ಸೆಸ್ ಪಾಲಿಗೆ ಚುನಾವಣೆ ಎನ್ನುವುದು ಹಿಸ್ಟರಿ ಅಂತೆ.

---------------------

ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡ್ತಾರೆ. ನಾವು ಒನ್‌ಡೇ ಮ್ಯಾಚ್ ಆಡಿ ಗೆಲ್ತೇವೆ - ಯು.ಟಿ.ಖಾದರ್, ಸಚಿವ

ಮ್ಯಾಚ್ ಆಡ್ತಾ ಕೂತರೆ, ಆಡಳಿತ ನಡೆಸುವವರು ಯಾರು?

---------------------

ಭಾರತವನ್ನು ಜಗದ್ಗುರುವಾಗಿಸುವುದು ಬಿಜೆಪಿ ಪರಿಕಲ್ಪನೆ - ನಳಿನ್‌ಕುಮಾರ್ ಕಟೀಲು, ಸಂಸದ

ಪಂಪ್‌ವೆಲ್ ಓವರ್ ಬ್ರಿಡ್ಜ್‌ನ್ನು ನೋಡಲು ಜಗದೆಡೆಗಳಿಂದ ಜನರು ಆಗಮಿಸುತ್ತಿದ್ದಾರೆ.

---------------------

ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುವ ಆಸೆ ನಮಗಿಲ್ಲ - ಸದಾನಂದಗೌಡ, ಕೇಂದ್ರ ಸಚಿವ

ರಾಮ ಮಾರ್ಗವಂತೂ ಬಿಜೆಪಿ ಪಾಲಿಗೆ ಮುಚ್ಚಿಕೊಂಡಿದೆ.

---------------------

ಬಿಎಸ್ಪಿ-ಎಸ್ಪಿ ಮೈತ್ರಿ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ನಿರ್ಧರಿಸಲಿದೆ - ಮಾಯಾವತಿ, ಬಿಎಸ್ಪಿ ನಾಯಕಿ

ಸಾಮಾನ್ಯ ವರ್ಗಕ್ಕೆ 10 ಪರ್ಸೆಂಟ್ ಮೀಸಲಾತಿಯೇ ಎಲ್ಲವನ್ನು ನಿರ್ಧರಿಸುತ್ತದೆ ಎಂದು ಮೋದಿ ಹೇಳುತ್ತಿದ್ದಾರೆ.

---------------------

ಸಂಕ್ರಾತಿಯಾದರೂ ಸರಿ ಮುಂದಿನ ಯುಗಾದಿಯಾದರೂ ಸರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ - ಪ್ರತಾಪಸಿಂಹ, ಸಂಸದ

ಶಿವರಾತ್ರಿಯನ್ನು ಯಾಕೆ ಬಿಟ್ಟಿರಿ?

---------------------

ಕಾಂಗ್ರೆಸ್ ನಾಯಕರು ತೊಟ್ಟಿಲನ್ನು ತೂಗುತ್ತಾ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದಾರೆ - ಸಿ.ಟಿ.ರವಿ, ಶಾಸಕ

ಯಡಿಯೂರಪ್ಪರನ್ನು ನೀವು ಚಿವುಟುತ್ತಿರುವ ಹಾಗೆ.

---------------------

ನಮ್ಮದು ರಕ್ತಗತವಾಗಿ ಕಾಂಗ್ರೆಸ್ ವಂಶ - ಡಾ.ಅಜಯ್‌ಸಿಂಗ್, ಶಾಸಕ

ಜನರು ರಕ್ತಪಾತ ಎಂದು ಕೇಳಿಸಿಕೊಂಡಿದ್ದಾರೆ.

---------------------

ಮುಸ್ಲಿಮರು ಜೆಡಿಎಸ್‌ನಿಂದ ದೂರವಾಗಲು ಕಾಂಗ್ರೆಸ್ ಪಕ್ಷವೇ ಕಾರಣ - ದೇವೇಗೌಡ, ಮಾಜಿ ಪ್ರಧಾನಿ

ಕಾಂಗ್ರೆಸ್‌ಗೆ ಜೆಡಿಎಸ್ ಹತ್ತಿರವಾಗಲು?

---------------------

ಸಮಯ ಬಂದಾಗ ನನ್ನ ಮನಸ್ಸಿನಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ - ಶತ್ರುಘ್ನ ಸಿನ್ಹಾ, ಬಿಜೆಪಿ ನಾಯಕ

ಬಿಜೆಪಿಯವರಿಗೆ ಅದು ಗೊತ್ತಾಗಿ ಬಿಟ್ಟಿದೆ.

---------------------

ಜ.19ರ ವಿರೋಧ ಪಕ್ಷಗಳ ರ್ಯಾಲಿ ಬಿಜೆಪಿ ಪಾಲಿಗೆ ಸಾವಿನ ಗಂಟೆಯಾಗಲಿದೆ - ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ

ಬಿಜೆಪಿ ದೇವಸ್ಥಾನದ ಗಂಟೆಯನ್ನು ನಂಬಿಕೊಂಡಿದೆ.

---------------------

ಪ್ರಧಾನಿ ಮೋದಿಯಂತಹ ಡೈನಾಮಿಕ್ ಲೀಡರ್ ಇದುವರೆಗೆ ಯಾರೂ ಬಂದಿಲ್ಲ - ಎಸ್.ಎಲ್.ಭೈರಪ್ಪ, ಸಾಹಿತಿ

ಶೇ.10 ಮೀಸಲಾತಿಯಿಂದ ರೋಮಾಂಚಿತರಾದಂತಿದೆ.

---------------------

ಆಪರೇಶನ್ ಕಮಲ ಫೇಲಾಗಿದ್ದರಿಂದ ಅಮಿತ್ ಶಾಗೆ ಹಂದಿಜ್ವರ - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ

ಹಂದಿಗಳೆಲ್ಲ ಸಿಟ್ಟಾಗಿವೆ.

---------------------

ಮನುಷ್ಯ 75 ವರ್ಷ ಆದ ಮೇಲೆ ನಿವೃತ್ತಿಯಾಗಬೇಕು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

75 ವರ್ಷ ತುಂಬಾ ದೀರ್ಘ ಆಯಿತು.

---------------------

ದನಕರುಗಳಿಗೆ ಇರುವಷ್ಟು ಮುಕ್ತ ಸ್ವಾತಂತ್ರ ರಾಜ್ಯದ ಶಾಸಕರಿಗಿಲ್ಲ - ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ

ದನಕರುಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...