ಶಿವಕುಮಾರ ಸ್ವಾಮೀಜಿ ನಿಧನ: ತೋಂಟದ ಸಿದ್ಧರಾಮ ಸ್ವಾಮಿ ಸಂತಾಪ

Update: 2019-01-21 17:06 GMT

ಬೆಂಗಳೂರು, ಜ. 21: ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿ ನಮ್ಮ ಮಧ್ಯದಲ್ಲಿ ಬದುಕಿ ಬಾಳಿದ ನಡೆದಾಡುವ ದೇವರು. ಶ್ರೀಮಠದ ಪೀಠಾಧಿಪತಿಗಳಾಗಿ ಸತತ ಎಂಟು ದಶಕಗಳ ಕಾಲ ಈ ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದು ಗದಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸಂತಾಪ ಸೂಚಿಸಿದ್ದಾರೆ.

ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ, ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ ವಿದ್ಯಾದಾನ ಮಾಡುತ್ತ ಅವರ ಬಾಳನ್ನು ಬೆಳಗಿದವರು. ಅವರು ನಮ್ಮ ದಿನಮಾನದ ಸಂತಶ್ರೇಷ್ಠರು. ಬಸವಾದಿ ಶರಣರ ದಾಸೋಹ ತತ್ವವನ್ನು ಆಧುನಿಕ ದಿನಮಾನದಲ್ಲಿ ಸಾಕಾರಗೊಳಿಸಿದ ಪುಣ್ಯಪುರುಷರು. ಇಂದು ಅವರು ಬಯಲಿನಲ್ಲಿ ಬಯಲಾದುದು ಸಮಸ್ತ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದಂತಾಗಿದೆ. ಒಬ್ಬ ಮಠಾಧಿಪತಿ ಹೇಗಿರಬೇಕು ಎಂಬುದಕ್ಕೆ ಮಾದರಿ ಎನಿಸಿದವರು. ಆಧುನಿಕ ಕಾಲದಲ್ಲಿ ಬಸವಾದಿ ಶರಣರ ದಾಸೋಹ ತತ್ವಕ್ಕೆ ಬಹುದೊಡ್ಡ ನೆಲೆಯನ್ನು ಒದಗಿಸಿದರು. ತಮ್ಮ ಸಾಧನೆ ಸಿದ್ಧಿಗಳ ಮೂಲಕ ಬದುಕಿರುವಾಗಲೇ ಅವರು ದಂತಕತೆಯಾದವರು.

ತ್ರಿವಿಧ ದಾಸೋಹಿ, ಕರ್ನಾಟಕ ರತ್ನಗಳಿಂದ ಭೂಷಿತರಾದ ಶ್ರೀಗಳು ಈ ನಾಡಿಗೆ ತನ್ಮೂಲಕ ನಮ್ಮ ರಾಷ್ಟ್ರಕ್ಕೆ ಕೊಟ್ಟ ಕೊಡುಗೆ ಅಪೂರ್ವವಾದುದು. ಅವರ ಬದುಕು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿತವಾದುದು. 112 ವರ್ಷಗಳ ವರೆಗೆ ಕ್ರಿಯಾಶೀಲರಾಗಿ ಬದುಕಿದ ಶ್ರೀಗಳು ತಮ್ಮ ನಡೆ-ನುಡಿ, ಸಾಧನೆ-ಸಿದ್ಧಿಗಳಿಂದ ನಡೆದಾಡುವ ದೇವರೆನಿಸಿದ್ದರು.

ಜಾತಿ-ಮತ-ಧರ್ಮಗಳ ಎಲ್ಲೆಯನ್ನು ಮೀರಿ ಎಲ್ಲರಿಗೂ ಆರಾಧ್ಯರೆನಿಸಿದ್ದರು. ಅವರ ಅಗಲಿಕೆ ನಾಡ ಜನತೆಯನ್ನು ಬಹುಕಾಲ ಬಾಧಿಸದಿರದು. ಪೂಜ್ಯರ ಆದರ್ಶದ ಮಾರ್ಗದಲ್ಲಿ ನಾವು ಮುನ್ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ. ಕೇಂದ್ರ ಸರಕಾರವು ಅವರಿಗೆ ಮರಣೋತ್ತರ ‘ಭಾರತರತ್ನ’ ಪ್ರಶಸ್ತಿಯನ್ನು ನೀಡಿ ಗೌರಸಬೇಕೆಂದು ತೋಂಟದ ಸಿದ್ದರಾಮ ಸ್ವಾಮಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News