ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು: ಮಾದಾಪುರದಲ್ಲಿ ಟೈಲರಿಂಗ್, ಕಸೂತಿ ತರಬೇತಿ ಕೇಂದ್ರ ಆರಂಭ

Update: 2019-01-21 18:08 GMT

ಮಡಿಕೇರಿಮ ಜ.21: ಪ್ರಕೃತಿ ವಿಕೋಪದಿಂದ ಅನೇಕ ತೊಂದರೆ ಉಂಟಾಗಿ, ಕೊಡಗಿನ ಜನರ ಸಮಕಷ್ಟಕ್ಕೆ ತುತ್ತಾಗಿದ್ದರು, ಆ ಸಂದರ್ಭದಲ್ಲಿ ರಾಜ್ಯದ ಜನತೆ ಸಹಾಯಹಸ್ತ ಕಲ್ಪಿಸಿ ನೆರವಿಗೆ ಧಾವಿಸಿದರು ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ಸ್ಮರಿಸಿದರು.      

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ವತಿಯಿಂದ ಮಾದಾಪುರದಲ್ಲಿ ಸೋಮವಾರ ಶ್ರೀ ಶಾರದಾ ಟೈಲರಿಂಗ್ ಮತ್ತು ಕಸೂತಿ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಮನೆ-ಮಠ ಕಳೆದುಕೊಂಡವರಿಗೆ ಮಾದಾಪುರ ಮತ್ತು ಕರ್ಣಂಗೇರಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮನೆ ಕಟ್ಟಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕರು ನುಡಿದರು. 

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಹುದು ಎಂಬ ಮಾತಿನಂತೆ ಕೆಲಸಗಳನ್ನು ಮನಸ್ಸಿನಿಂದ ಮಾಡಬೇಕು. ಟೈಲರಿಂಗ್ ಕಲಿಯುವುದರಿಂದ ಉತ್ತಮ ಅವಕಾಶವಿದೆ. ಈ ವೃತ್ತಿಯನ್ನು ಸರಿಯಾಗಿ ಕಲಿತುಕೊಂಡರೆ ಉತ್ತಮ ಜೀವನ ನಡೆಸಬಹುದು. ನಿಷ್ಠೆಯಿಂದ ಕೆಲಸ ಕಲಿತು ಬೇರೆಯವರಿಗೆ ಸಹಾಯ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.  

ಶಾಸಕರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ, ನೊಂದವರಿಗೆ ಸಹಾಯ ಹಸ್ತ ನೀಡುವ ಕೆಲಸ ಆಶ್ರಮದ ವತಿಯಿಂದ ನಡೆಯುತ್ತಿದೆ. ಎಲ್ಲರೂ ಸಹ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬನೆ ಜೀವನ ನಡೆಸುವಂತಾಗಬೇಕು. ತರಬೇತಿಯನ್ನು ಶ್ರದ್ಧೆಯಿಂದ ಕಲಿತು ಮುಂದೆ ಬರಬೇಕು ಎಂದು ಅವರು ತಿಳಿಸಿದರು.  

ಶಾಸಕರಾದ ಸುನೀಲ್ ಸುಬ್ರಮಣಿ ಅವರು ಮಾತನಾಡಿ, ಕಷ್ಟ ಕಾಲದಲ್ಲಿ ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳುವಂತಾಗಬೇಕು. ಎಲ್ಲರೂ ಒಟ್ಟಾಗಿ ಕಷ್ಟಗಳನ್ನು ಎದುರಿಸಬೇಕು. ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡುವಂತಾಗಬೇಕು ಹಾಗೂ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬನೆ ಜೀವನ ನಡೆಸುವತ್ತ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.   

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಬೋಧಸ್ವರೂಪನಂದ ಅವರು ಮಾತನಾಡಿ, ಎಲ್ಲರೂ ಹಿಂದಿನಂತೆ ಆರ್ಥಿಕವಾಗಿ ಸಬಲರಲಾಗಬೇಕು ಎಂಬ ಉದ್ದೇಶದಿಂದ ರಾಮಕೃಷ್ಣ ಆಶ್ರಮದಿಂದ ಟೈಲರಿಂಗ್, ಕಸೂತಿ, ಜೇನು ಕೃಷಿ ತರಬೇತಿ, ಆಹಾರ ಸಂಸ್ಕರಣೆಯ ತರಬೇತಿ, ಯುವ ಜನರಿಗೆ ವಾಹನ ಚಾಲನೆ ತರಬೇತಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.  

ಪ್ರತಿಯೊಬ್ಬರಿಗೂ ಸ್ವಾವಲಂಬಿ ಜೀವನ ನಡೆಸಲು ಆವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. 
ಇತ್ತೀಚೆಗೆ ಜಿಲ್ಲೆಯಲ್ಲಾದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬದವರಿಗೆ ಸುಮಾರು 70 ಲಕ್ಷ ಮೌಲ್ಯದ ಪರಿಹಾರ ವಸ್ತುಗಳನ್ನು ಆಶ್ರಮದ  ವತಿಯಿಂದ ವಿತರಿಸಲಾಗಿದೆ. ಸಂತ್ರಸ್ತರ ಆರ್ಥಿಕ ಪುನರ್ವಸತಿಗಾಗಿ ಮಾದಾಪುರ ಮತ್ತು ಸೂರ್ಲಬ್ಬಿಯಲ್ಲಿ ಟೈಲರಿಂಗ್ ಮತ್ತು ಕಸೂತಿ ಘಟಕ, ಸೂರ್ಲಬ್ಬಿಯಲ್ಲಿ ಜೇನು ಕೃಷಿ ತರಬೇತಿ, ಆಹಾರ ಸಂಸ್ಕರಣೆಯ ತರಬೇತಿ, ಯುವಜನರಿಗೆ ವಾಹನ ಚಾಲನೆ ತರಬೇತಿ ನೀಡಿ ಪರವಾನಗಿಗಳನ್ನು ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ಬೋಧಸ್ವರೂಪನಂದ ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಪ್ರಮುಖರಾದ ಸ್ವಾಮಿ ದೀಪಕರ್, ಸುಬೋಧ್ ರಾವ್, ಜಿಪಂ ಮಾಜಿ ಸದಸ್ಯರಾದ ಟಿ.ಪಿ.ಸಂದೇಶ್ ಗ್ರಾಪಂ ಸದಸ್ಯರಾದ ಉಮೇಶ್, ಶಾಂತಾ ಇತರರು ಹಾಜರಿದ್ದರು. ಪತ್ರಕರ್ತರಾದ ಚಿ.ನಾ.ಸೋಮೇಶ್ ಅವರು ನಿರೂಪಿಸಿದರು, ತರಬೇತಿ ಶಿಕ್ಷಕರಾದ ರಜನಿ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News