ಉದ್ಯೋಗ, ಪ್ರೋತ್ಸಾಹ ಧನ ಇಲ್ಲದೇ ಸಂಕಷ್ಟ: ನೇಕಾರರಿಂದ ಸಾಮೂಹಿಕ ದಯಾಮರಣ ಕೋರಿ ಅರ್ಜಿ
Update: 2019-01-23 16:07 GMT
ಬಾಗಲಕೋಟೆ, ಜ.23: ಉದ್ಯೋಗ ಇಲ್ಲದೇ, ಸರಕಾರದ ಪ್ರೋತ್ಸಾಹ ಧನವೂ ಇಲ್ಲದೇ ನೇಕಾರರು ಸಂಕಷ್ಟಕ್ಕೆ ಒಳಗಾಗಿದ್ದು, ಬಾಗಲಕೋಟೆಯ ನೇಕಾರರು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಸಾಮೂಹಿಕ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಉದ್ಯೋಗ ಇಲ್ಲದ ನೇಕಾರರು ಕಳೆದ ಹಲವು ದಿನಗಳಿಂದ ಇಲ್ಲಿನ ಬನಹಟ್ಟಿಯಲ್ಲಿ ಗಂಜಿ ಹೋರಾಟ ನಡೆಸಿದ್ದರು. ಮನೆ ಮನೆಗೆ ತೆರಳಿ ಧಾನ್ಯ ಸಂಗ್ರಹಿಸಿ ಗಂಜಿ ಕೇಂದ್ರದಲ್ಲಿ ಊಟ ಮಾಡಿದ್ದರು. ಇಷ್ಟಾದರೂ ನೇಕಾರರ ಬೇಡಿಕೆಗೆ ಸರಕಾರ ಸ್ಪಂದಿಸಿಲ್ಲ. ನೇಕಾರರಿಗೆ ಉದ್ಯೋಗ ಇಲ್ಲದ ದಿನ ಕೆಎಚ್ಡಿಸಿ ನಿಗಮದಿಂದ 500 ರೂ. ಸಂಬಳ ನೀಡಬೇಕೆನ್ನುವ ಬೇಡಿಕೆ ಇಟ್ಟಿದ್ದರು. ಅದ್ಯಾವುದಕ್ಕೂ ಸ್ಪಂದನೆ ಸಿಗದ ಕಾರಣ ಈಗ ಅಂತಿಮವಾಗಿ ಸಾಮೂಹಿಕ ದಯಾಮರಣ ಕೋರಿ ನೇಕಾರರು ಅರ್ಜಿ ಸಲ್ಲಿಸಿದ್ದಾರೆ.