ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆಯಾಚನೆಗೆ ಸಂಸದ ಪ್ರಹ್ಲಾದ್ ಜೋಶಿ ಆಗ್ರಹ
ಹುಬ್ಬಳ್ಳಿ,ಜ.23: ಭಾರತ್ ಕೋ ತುಕಡೇ ತುಕಡೇ ಕರೋಂಗಿ ಅಂದವರನ್ನು ಕರೆದುಕೊಂಡು ಬಂದು ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಮಾಡಿದ್ದಾರೆ. ರಾಜ್ಯ ಸರ್ಕಾರ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಜೆ ಹಾಗೂ ಶೋಕಾಚರಣೆ ಘೋಷಣೆ ಮಾಡಿದ್ದರೂ ಈ ರೀತಿ ಮಾಡಿರುವುದು ಸರಿಯಲ್ಲ, ಇದು ಆಕ್ಷಮ್ಯ ಅಪರಾಧ. ಶೀಘ್ರವೇ ಪ್ರಿಯಾಂಕ್ ಕ್ಷಮೆ ಯಾಚನೆ ಮಾಡಬೇಕೆಂದು ಎಂದು ಸಂಸದ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೈತಿಕತೆ ಅನ್ನೋದು ಕಾಂಗ್ರೆಸ್ ಅವರಿಗೆ ಗೊತ್ತೇ ಇಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅನ್ನೋದು ಅಪ್ರಸ್ತುತ. ಕೂಡಲೆ ಕಾಂಗ್ರೆಸ್ ಅಧ್ಯಕ್ಷ ಈ ಘಟನೆ ಬಗ್ಗೆ ಕ್ಷಮೆ ಕೇಳಬೇಕು. ಅಲ್ಲದೆ ಸಿಎಂ, ಡಿಸಿಎಂ ಉತ್ತರ ಕೊಡಬೇಕು ಎಂದರು.
ರೆಸಾರ್ಟ್ ನಲ್ಲಿ ಶಾಸಕರ ಗಲಾಟೆ ಪ್ರಕರಣ ಕುರಿತು ಮಾತನಾಡಿದ ಅವರು, ಇದು ಕಾಂಗ್ರೆಸ್ ನ ಡ್ರಾಮ. ಎಲ್ಲರನ್ನೂ ಅಲ್ಲಿಗೆ ಕರೆದುಕೊಂಡು ಹೋಗಿದ್ದು ಏಕೆ ಎಂದು ಪ್ರಶ್ನಿಸಿದರು. ಎಲ್ಲಾ ಡ್ರಾಮ ಮುಗಿದ ಮೇಲೆ 307 ಕೇಸ್ ಹಾಕಿದ್ದಾರೆ. ಹೀಗಾಗಿ ಎಲ್ಲರ ಮೇಲೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಬಿಜೆಪಿ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ಜಾತಿ ರಾಜಕಾರಣ ಮಾಡುವುದು ಕಾಂಗ್ರೆಸಿಗರು. ನಗರದ ಅಭಿವೃದ್ಧಿ ವಿಚಾರದಲ್ಲಿ ಒಂದು ಸಮುದಾಯವನ್ನು ಎತ್ತಿಕಟ್ಟಿ ಬಿಜೆಪಿಯವರ ಹೆಸರನ್ನು ಹಾಳು ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಅನಾವಶ್ಯಕ ರಾಜಕಾರಣ ತಂತ್ರ ಬಳಸದೆ ನಗರದ ಹಾಗೂ ಸಾರ್ವಜನಿಕರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ನನ್ನ ಮೇಲೆ ಕಾಂಗ್ರೆಸ್ ನವರು ದೂರು ದಾಖಲಿಸುವುದಾದರೆ ದಾಖಲಿಸಲಿ. ನಾನು ಮುಂದಿನ ವಿಚಾರಣೆಯನ್ನು ಕೋರ್ಟ್ ನಲ್ಲಿ ನೋಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.