×
Ad

ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲಾಯಿತು: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-01-25 19:55 IST

ಬಾಗಲಕೋಟೆ, ಜ.25: ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಯೋಜನೆಯೇ ನನಗೆ ಇರಲಿಲ್ಲ. ನಾನು ಬಸವಣ್ಣನ ಅನುಯಾಯಿ. ಆದುದರಿಂದಲೇ, ಬಸವ ಜಯಂತಿ ದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಬಾಗಲಕೋಟೆಯ ಹುನಗುಂದದಲ್ಲಿ ಪಂಚಮಸಾಲಿ ಲಿಂಗಾಯತ ಸಮಾವೇಶ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಡಬೇಕೆಂಬ ಬೇಡಿಕೆಯನ್ನು, ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಮಾಡಿಕೊಟ್ಟೆ. ಇದಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸನ್ಮಾನಿಸಿದರು ಎಂದು ಅವರು ಹೇಳಿದರು.

ಅದೇ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಎಂಬ ಬೇಡಿಕೆ ಬಂತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ, ನಾಲ್ಕೈದು ಅರ್ಜಿಗಳನ್ನು ನೀಡಿದರು. ಆಗ ನಾನೇನು ಮಾಡಬೇಕಿತ್ತು ? ಸಚಿವ ಸಂಪುಟದ ಎದುರು ವಿಷಯವನ್ನು ಇಟ್ಟು ಚರ್ಚಿಸುವ ವೇಳೆ, ಈಶ್ವರ್ ಖಂಡ್ರೆ, ಶಾಮನೂರು ಸೇರಿದಂತೆ ಯಾರೊಬ್ಬರೂ ವಿರೋಧ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಆದರೆ, ಈಗ ನನ್ನನ್ನು ಲಿಂಗಾಯತ ಸಮುದಾಯವನ್ನು ಒಡೆಯುತ್ತಿದ್ದಾನೆ ಎಂದು ಬಿಂಬಿಸಲಾಗುತ್ತಿದೆ. ಈ ವಿಚಾರದಲ್ಲಿ ನನ್ನ ತಪ್ಪೇನಿದೆ. ಬೌದ್ಧ, ಜೈನ ಧರ್ಮದಂತೆ ಲಿಂಗಾಯತವು ಪ್ರತ್ಯೇಕ ಧರ್ಮ. ಇತಿಹಾಸ ಗೊತ್ತಿಲ್ಲದವರು ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಮಹನೀಯರು, ಸಮಾಜ ಸುಧಾರಕರ ಜಯಂತಿಗಳನ್ನು ಮಾಡಿದೆ. ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಇರಬೇಕೆಂದು ಆದೇಶ ಮಾಡಿದೆ. ಆದರೂ, ನಾನು ಜಾತಿ ಸಮಾವೇಶಗಳನ್ನು ಮಾಡುತ್ತೇನೆ ಎಂದು ಟೀಕಿಸುತ್ತಾರೆ. ಇಂತಹ ಟೀಕೆಗಳನ್ನು ಮಾಡುವವರೇ ಜಾತಿವಾದಿಗಳು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಸವಾದಿ ಶರಣರ ಕನಸು ಜಾತ್ಯತೀತ ಸಮಾಜ. ಆದರೆ, ಇವತ್ತು ನಮ್ಮ ಸಮಾಜದಲ್ಲಿ ‘ಇವನ್ಯಾರು’ ಎನ್ನುವ ಒಂದು ವರ್ಗವಿದ್ದರೆ, ಮತ್ತೊಂದೆಡೆ ಇವರು ‘ನಮ್ಮವರು’ ಎನ್ನುವ ಇನ್ನೊಂದು ವರ್ಗವಿದೆ. ಆದರೆ, ಎಲ್ಲರೂ ನಮ್ಮವರು ಎನ್ನುವ ಸಮಾಜ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ನಡೆದ ಅಪಪ್ರಚಾರದಲ್ಲಿ ನನ್ನದೇನು ತಪ್ಪಿಲ್ಲ ಎಂದು ನೀವು ಹೇಳುತ್ತಿದ್ದೀರಿ, ಹಾಗಾದರೆ, ನೀವು ನನ್ನ ಜೊತೆ ಇರಬೇಕಲ್ಲ. ಅದನ್ನು ಬಿಟ್ಟು, ನಾನು ಲಿಂಗಾಯತ ಸಮಾಜವನ್ನು ವಿಭಜನೆ ಮಾಡಿದೆ ಎಂದು ನನ್ನನ್ನು ಹಾಕಿಕೊಂಡು ಹೊಡಿತೀರಲ್ಲಪ್ಪ ಎಂದು ಸಿದ್ದರಾಮಯ್ಯ ಸಭಿಕರಿಗೆ ಪ್ರಶ್ನಿಸಿದರು.

ಬಡವರು ಯಾವ ಜಾತಿ, ಧರ್ಮದಲ್ಲಿ ಇದ್ದರೂ ಅವರ ಜೊತೆ ನಾನು ನಿಲ್ಲುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ರೈತರ ಸಾಲಮನ್ನಾ, ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಹೊಂಡ, ವಿದ್ಯಾಸಿರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ಯಾವ ಜಾತಿಯನ್ನು ನೋಡಿಲ್ಲ. ಆದರೂ, ನನ್ನ ವಿರುದ್ಧ ಅಪಪ್ರಚಾರ ನಡೆಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News