ನಾನು ಟೇಬಲ್ ಕುಟ್ಟಿ ಮಾತನಾಡಬಾರದಿತ್ತು: ವಿಷಾದ ವ್ಯಕ್ತಪಡಿಸಿದ ಮಹಿಳೆ

Update: 2019-01-28 15:59 GMT

ಮೈಸೂರು,ಜ.28: ಮಹಿಳೆ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕೋಪಗೊಂಡು ಗದರಿದ ಘಟನೆಯ ಬಗ್ಗೆ ಮಹಿಳೆ ಜಮಾಲಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಹಳ ಒಳ್ಳೆಯವರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಟೇಬಲ್ ಕುಟ್ಟಬಾರದಿತ್ತು. ನಾನು ಟೇಬಲ್ ಕುಟ್ಟಿ ಮಾತನಾಡಿದ್ದರಿಂದ ಸಿದ್ದರಾಮಯ್ಯ ಅವರಿಗೆ ಕೋಪ ಬಂತು. ಅವರು ನನ್ನ ಜೊತೆ ಚೆನ್ನಾಗಿಯೇ ಮಾತನಾಡುತ್ತಿದ್ದರು. ನಾನೇ ಅವರಿಗೆ ಕೋಪ ಬರುವ ಹಾಗೆ ನಡೆದುಕೊಂಡೆ. ಈ ಘಟನೆ ನಡೆದ ನಂತರ ಅವರಲ್ಲಿ ಕ್ಷಮೆ ಯಾಚಿಸಿದ್ದೇನೆ ಎಂದು ಹೇಳಿದರು.

ನಮ್ಮ ಗ್ರಾಮದಲ್ಲಿ ರೆವೆನ್ಯೋ ಇಲಾಖೆಗೆ ಸೇರಿದ ಸಮಸ್ಯೆ ಇತ್ತು. ಈ ಸಂಬಂಧ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಸಾಹೇಬರು ನಮ್ಮ ಊರಿಗೆ ಬಂದಿದ್ದಾರಲ್ಲ ಎಂದು ಅಧಿಕಾರಿಗಳಿಗೆ ಗೊತ್ತಾಗಲಿ ಎಂದು ಮೈಕ್ ಹಿಡಿದು ಮಾತನಾಡಿದೆ. ಆವೇಶದಲ್ಲಿ ಟೇಬಲ್ ಕುಟ್ಟಿದೆ. ನನ್ನಿಂದ ತಪ್ಪಾಗಿದೆ ಎಂದು ಹೇಳಿದರು.

ಈ ಘಟನೆ ಈ ಮಟ್ಟಕ್ಕೆ ಹೋಗುತ್ತದೆ ಎಂದು ಗೊತ್ತಾಗಿದ್ದರೆ ನಾನು ಸಮಸ್ಯೆಯನ್ನೇ ಹೇಳುತ್ತಿರಲಿಲ್ಲ. ಸಿದ್ದರಾಮಯ್ಯ ಹಿಂದೆಯಲ್ಲಾ ಈ ರೀತಿ ನಡೆದುಕೊಂಡಿರಲಿಲ್ಲ. ಅವರಿಗೆ ಕೋಪ ಬರುವ ರೀತಿ ನಾನೇ ಮಾಡಿದ್ದು ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News