ಮಲೆನಾಡಿನಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ: ಶಾಸಕ ರಾಜೇಗೌಡ

Update: 2019-01-28 18:22 GMT

ಕೊಪ್ಪ, ಝ.28: ಮಲೆನಾಡಿನಲ್ಲಿ ಪ್ರವಾಸೋಧ್ಯಮಕ್ಕೆ ಹೆಚ್ಚು ಅವಕಾಶವಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಮುಂದಿನ ಐದು ವರ್ಷಗಳಲ್ಲಿ ಮಲೆನಾಡಿನ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು. 

ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಪಟ್ಟಣದ ಪುರಭವನದಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಆಲಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರಕ್ಕೆ 130 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು  96 ಕೋಟಿ ರೂ. ಬಿಡುಗಡೆಗೆ ಆದೇಶ ಆಗಿದೆ. ಆದ್ಯತೆ ಮೇಲೆ ಕಾಮಗಾರಿಗಳನ್ನು ನಡೆಸಲಾಗುವುದು. ಪಟ್ಟಣದ ರಸ್ತೆ ಅಗಲೀಕರಣ ವಿಚಾರದಲ್ಲಿ ಆತುರ ಇಲ್ಲ. ರಸ್ತೆ ಬದಿಯ ಕಟ್ಟಡ ಮಾಲಕರ ಅಭಿಪ್ರಾಯ ಪಡೆದು ಅವರ ಒಪ್ಪಿಗೆ ಮೇರೆಗೆ ಮುಂದುವರಿಯಲಾಗುವುದು. ರಸ್ತೆಗಾಗಿ ಜಾಗ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರಕ್ಕೆ ಕ್ರಮ ತೆಗೆದು ಕೊಳ್ಳಲಾಗುವುದು. ಶಾಲಾ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ, ಅಪ್ತಾಪ್ತ ಮಕ್ಕಳು ವಾಹನ ಚಾಲನೆ ಮಾಡುವ ಬಗ್ಗೆ ಪೋಷಕರ ಗಮನಕ್ಕೆ ತರಲಾಗುವುದು. ಪೊಲೀಸ್ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರು ಮತ್ತು ಪೋಷಕರ ಸಹಕಾರ ಅಗತ್ಯ. ಪಟ್ಟಣದಲ್ಲಿ ವಾಹನ ದಟ್ಟನೆ ಮತ್ತು ಪಾರ್ಕಿಂಗ್ ಸಮಸ್ಯೆ ನಿಯಂತ್ರಿಸಲು ಮುಖ್ಯ ರಸ್ತೆಗೆ ಸಮನಾಂತರ ರಸ್ತೆ ನಿರ್ಮಾಣ, ವಾಯುವಿಹಾರಕ್ಕೆ ಅನುಕೂಲವಾಗುವಂತೆ ಉದ್ಯಾನವನ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು.

ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲು ಕೆಸವಿನ ಕೆರೆ ಅಭಿವೃದ್ಧಿಗೆ ಈಗಾಗಲೇ ಪಟ್ಟಣ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಡಿಪಿಆರ್ ತಯಾರಿಸಲು ರೂ. 10 ಲಕ್ಷದಲ್ಲಿ ಈಗಾಗಲೇ ರೂ. 5 ಲಕ್ಷ ಪಾವತಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸುತ್ತಲಿನ ಗ್ರಾಮಗಳಿಗೂ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಹಣ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಹೊರಜಿಲ್ಲೆಗಳಿಂದ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಬರಲು ಅನುಕೂಲವಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ಸಭೆ ಕರೆದು ಜನಾಭಿಪ್ರಾಯದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಗೊಳ್ಳಲಾಗುವುದು. ಇಂದಿನ ಸಭೆಯಲ್ಲಿ ಗಮನಕ್ಕೆ ತಂದಿರುವ ಕಾರ್ಯಕ್ರಮಗಳ ಪೈಕಿ ಶೇ.25ರಷ್ಟನ್ನಾದರೂ ಮುಂದಿನ ಸಭೆಯೊಳಗೆ ಮುಗಿಸಿಕೊಡಲು ಬದ್ದನಾಗಿದ್ದೇನೆ ಎಂದರು.

ಸಭೆಯಲ್ಲಿ ಪ್ರಮುಖವಾಗಿ ಪಾರ್ಕಿಂಗ್ ಸಮಸ್ಯೆ, ರಸ್ತೆ ಅಗಲೀಕರಣ, ಉದ್ಯಾನವನ ನಿರ್ಮಾಣ, ಸುಸಜ್ಜಿತ ವಾಚನಾಲಯ ನಿರ್ಮಾಣ, ವಾಹನ ದಟ್ಟನೆ, ಚರಂಡಿ ದುರಸ್ತಿ, ಶುದ್ಧ ಕುಡಿಯುವ ನೀರು ಪೂರೈಕೆ, ಪ್ರವಾಸೋದ್ಯಮಕ್ಕೆ ಆದ್ಯತೆ, ಪಿಯುಸಿ ಕಾಲೇಜು ಪ್ರಾರಂಭ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಗೋಕಳ್ಳತನಕ್ಕೆ ತಡೆ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಕೈಗಾರಿಕಾ ಪ್ರದೇಶ ನಿರ್ಮಾಣ, ಮಾಂಸದ ಮಾರ್ಕೆಟ್ ಸ್ಥಳಾಂತರ, ಖಾಲಿ ಇರುವ ಪಟ್ಟಣ ಪಂಚಾಯತ್ ಮಳಿಗೆಗೆಳ ವಿಲೇವಾರಿ, ನೆಲ ಬಾಡಿಗೆ ಜಾಗ ತೆರವುಗೊಳಿಸಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಾಣ, ಹಿಂದೂ ರುದ್ರಭೂಮಿಗೆ ಇಲೆಕ್ಟ್ರಿಕ್ ಚಿತಾಗಾರ ನಿರ್ಮಾಣ, ಪುಟ್‍ಪಾತ್ ನಿರ್ಮಾಣ ಬೈಪಾಸ್ ರಸ್ತೆ ನಿರ್ಮಾಣ, ಪಟ್ಟಣ ಪಂಚಾಯತ್‍ಗೆ ಸೇರಿದ ಜಾಗ ಗುರುತಿಸಿ ವಿಲೇವಾರಿ ಮಾಡುವುದು, ನಿವೇಶನ ಹಂಚಿಕೆ, ಪಟ್ಟಣ ಹೊರವಲಯದ ಕೆಲವು ಪ್ರದೇಶಗಳನ್ನು ಪಟ್ಟಣ ಪಂಚಾಯತ್‍ಗೆ ಸೇರ್ಪಡೆ ಮಾಡುವುದು, ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿವುದು, ಪಿಯು ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯವಸ್ಥೆ ಮಾಡುವುದು, ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವುದು, ಜೆಸಿ ಸಂಸ್ಥೆಗೆ ನಿವೇಶನ ಕೊಡುವುದು, ಕಾಣೆಹಳ್ಳದ ದುರಸ್ತಿ, ಪಟ್ಟಣ ಶಾಲೆಯನ್ನು ಅಭಿವೃದ್ಧಿಪಡಿಸುವುದು, ಎಸ್‍ವಿಟಿ ರಸ್ತೆ ಅಭಿವೃದ್ಧಿ, ವಾಟರ್ ಟ್ಯಾಂಕ್ ಸರ್ಕಲ್ ಮತ್ತು ಚಿಕ್ಕಮಗಳೂರು ಸರ್ಕಲ್ ನಿರ್ಮಾಣ ಮುಂತಾದ ವಿಚಾರಗಳನ್ನು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಸಭೆಯಲ್ಲಿ ಎಂ.ಆರ್. ಕಣ್ಣನ್, ಡಾ.ಶ್ಯಾನುಬಾಗ್, ವಕೀಲ ವಿಕ್ರಂ ನಿಗಳೆ, ಉಪನ್ಯಾಸಕ ಚಕ್ರಪಾಣಿ, ಪತ್ರಕರ್ತ ಸಂಜೀವ ಶೆಟ್ಟಿ, ಸ್ಪಂಧನ ಸಂಸ್ಥೆಯ ಸತ್ಯಜಿತ್ ಶೆಟ್ಟಿ, ಜಾನ್ ಪೆರೀಸ್, ಕೃಷ್ಣಾನಂದ ಪ್ರಭು, ಮಥಾಯಸ್, ದಯಾನಂದ್, ಕೆ.ಬಿ. ಉದಯಕುಮಾರ್, ಪ್ರಾನ್ಸಿಸ್ ಕಾರ್ಡೋಜ, ವೆಂಕಟೇಶ್, ಹೇಮಂತ್ ಶೆಟ್ಟಿ, ಪಾಂಡುರಂಗ, ಚಂದ್ರಶೇಖರ್, ಅಂಬುಜಾ, ಗೋಪಾಲ್, ಆಶಾ ಪೆರೀಸ್, ರಮೇಶ್, ಶಿವಶಂಕರ್, ಕೆ.ಎಸ್. ನಾಗರತ್ನ, ಶೇಖರ ಪೂಜಾರಿ, ನಾಗೇಶ್ ಶರ್ಮ, ಅಭಿರಾಮ್, ರವಿಕುಮಾರ್, ಪೂರ್ಣಿಮಾ, ಸತೀಶ್ ಕಲ್ಕೂರ್ ಮುಂತಾದವರು ತಮ್ಮ ಅಭಿಪ್ರಾಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News