2.60 ಕೋಟಿ ರೂ. ವೆಚ್ಚದಲ್ಲಿ ಕುಂಸಿ ರೈಲ್ವೇ ನಿಲ್ದಾಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

Update: 2019-01-30 12:12 GMT

ಶಿವಮೊಗ್ಗ, ಜ. 30: ಮುಂದಿನ ದಿನಗಳಲ್ಲಿ ಆಗಬಹುದಾದ ರೈಲು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ತಾಲೂಕಿನ ಕುಂಸಿ ರೈಲ್ವೆ ನಿಲ್ದಾಣವನ್ನು 2.60 ಕೋಟಿ ರೂ. ಹಾಗೂ ಸಾಗರ ತಾಲೂಕಿನ ಅರಸಾಳು ರೈಲ್ವೆ ನಿಲ್ದಾಣವನ್ನು 1.30 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಇಲಾಖೆಯು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. 

ಬುಧವಾರ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳ ಆವರಣದಲ್ಲಿ ಪ್ರತ್ಯೇಕವಾಗಿ ಏರ್ಪಡಿಸಿದ್ದ ನಿಲ್ದಾಣ ಕಾಮಗಾರಿಗಳ ಸುಧಾರಣೆ, ಮೇಲ್ಸೇತುವೆ ನಿರ್ಮಾಣ, ನಿರೀಕ್ಷಣಾ ಕೊಠಡಿ, ನೀರು, ವಿದ್ಯುತ್, ಶೌಚಾಲಯ ನಿರ್ಮಾಣ, ಪ್ಲಾಟ್‍ಫಾರ್ಮ್ ವಿಸ್ತೀರ್ಣ, ಪ್ಲಾಟ್‍ಫಾರ್ಮ್ ಶೆಲ್ಟರ್ ಸ್ಥಳಾವಕಾಶ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದ ನಂತರ ಸಮಾರಂಭಗಳನ್ನುದ್ದೇಶಿಸಿ ಅವರು ಮಾತನಾಡಿದರು. 

ಮಲೆನಾಡಿನ ಜನರ ಬಹುದಿನಗಳ ಆಶಯದಂತೆ ಹಾಗೂ ಅವರ ಅಗತ್ಯತೆಗಳನ್ನು ಮನಗಂಡು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕುಂಸಿಯಲ್ಲಿ ಇಂಟರ್‍ಸಿಟಿ ರೈಲು ನಿಲುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇನ್ನೊಂದು ವಾರದಲ್ಲಿ ಆದೇಶ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು. 
ಬಾಳೆಕೊಪ್ಪ-ಮರಸ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗದ ಜನರ ಆಶೋತ್ತರಗಳು ಹಾಗೂ ರೈಲ್ವೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಫೆಬ್ರವರಿ 3 ರಿಂದ ಬೆಂಗಳೂರು - ಶಿವಮೊಗ್ಗ ನಡುವೆ ವಾರದ ನಾಲ್ಕು ದಿನಗಳ ಕಾಲ ಜನಶತಾಬ್ಧಿ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ. ವಾರದ ಉಳಿದ ದಿನಗಳಲ್ಲಿ ಅದೇ ರೈಲನ್ನು ಮೈಸೂರಿಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ನೈಋತ್ಯ ರೈಲ್ವೇ ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಹೊಸಹಳ್ಳಿ-ತಮ್ಮಡಿಹಳ್ಳಿ-ಕುಂಸಿ-ಅರಸಾಳು ಸೇರಿದಂತೆ ಸುತ್ತಮುತ್ತಲ ಸುಮಾರು 50 ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಈ ಪ್ರದೇಶದ ವ್ಯಾಪ್ತಿಗೊಳಪಡುವ ಅಚ್ಚುಕಟ್ಟು ಪ್ರದೇಶಗಳ ಜಮೀನುಗಳಿಗೆ ನೀರು ಹಾಯಿಸುವ ಸಲುವಾಗಿ 300 ಕೋಟಿ ರೂ. ವೆಚ್ಚದಲ್ಲಿ ಕುಮುದ್ವತಿ ಅಥವಾ ತುಂಗಾನದಿಯಿಂದ ನೀರನ್ನು ಹರಿಸುವ ಯೋಜನೆ ಕಾರ್ಯಗತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು. 

ಶಿವಮೊಗ್ಗ - ಶೃಂಗೇರಿ - ಕೊಪ್ಪ ಮಾರ್ಗವಾಗಿ ಮಂಗಳ್ ರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಗೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಅಧಿಕೃತವಾಗಿ ಕೇಂದ್ರವು ಶೀಘ್ರದಲ್ಲಿ ಮಂಡಿಸಲಿರುವ ಬಜೆಟ್‍ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.

ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಅರಸಾಳು ರೈಲ್ವೆ ನಿಲ್ದಾಣದಿಂದಾಗಿ ಈ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಅಲ್ಲದೇ ಮಂಗಳೂರು ಸಂಪರ್ಕ ಸಾಧಿಸಿದಲ್ಲಿ ಈ ಭಾಗದಲ್ಲಿ ಆರ್ಥಿಕ ವ್ಯವಹಾರ ವೃದ್ಧಿಯಾಗುವ ನಿರೀಕ್ಷೆಯಿದ್ದು, ಜನಸಾಮಾನ್ಯರ ಬದುಕಿಗೆ ಆಸರೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗಾಗಿ ಸ್ವದೇಶಿ ದರ್ಶನ್ ಯೋಜನೆಯಡಿಯಲ್ಲಿ 42ಕೋಟಿ ರೂ.ಗಳ ವೆಚ್ಚದಲ್ಲಿ ಮಹತ್ವದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. 

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಕೆ.ಬಿ.ಅಶೋಕನಾಯ್ಕ್, ಮಾಜಿ ಶಾಸಕ ಸ್ವಾಮಿರಾವ್, ನೈಋತ್ಯ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್, ಅಪರ್ಣ ಗಾರ್ಗಿ, ಜಿ.ಪಂ.ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಸೇರಿದಂತೆ ಕುಂಸಿ ಮತ್ತು ಅರಸಾಳು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ರೈಲ್ವೆ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News