ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರಗತಿಪರರ ಪ್ರತಿಭಟನೆ
ಮೈಸೂರು,ಫೆ.4: ಭಾರತದ ಹೆಸರಾಂತ ಮಾನವ ಹಕ್ಕುಗಳ ಹೋರಾಟಗಾರ, ಸಾಹಿತಿ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರೊ.ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿದ ಮಹಾರಾಷ್ಟ್ರ ಪೊಲೀಸರ ನಡೆಯನ್ನು ಖಂಡಿಸಿ ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯದ ಮುಂಭಾಗ ಸೋಮವಾರ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು ಮಾತನಾಡಿ, ಕಾರಣವಿಲ್ಲದೇ ಬಂಧಿಸುವ ಈ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಇದು ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕ್ರಮ. ಆದ್ದರಿಂದ ಸಂವಿಧಾನದಲ್ಲಿ ನಂಬಿಕೆಯಿರುವ ಎಲ್ಲರೂ ಸರ್ಕಾರದ ಈ ಕ್ರಮವನ್ನು ಖಂಡಿಸಬೇಕು ಎಂದರು. ಎಲ್ಲಾ ಪ್ರಜ್ಞಾವಂತರೂ ವಿಚಾರವಂತರೂ ಉಗ್ರವಾಗಿ ವಿರೋಧಿಸಬೇಕು, ಪ್ರೊ.ಆನಂದ್ ತೇಲ್ತುಂಬ್ಡೆ ಅವರ ಮೇಲೆ ಹೊರಿಸಿರುವ ಸುಳ್ಳು ಆರೋಪಗಳ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್, ವಿಮಲ.ಎಸ್, ಪ್ರೊ.ಕೆ.ಎಸ್.ಭಗವಾನ್, ಕೆ.ಎಸ್.ಶಿವರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.