ಪೊಲೀಸ್ ಮೇಲೆ ಹಲ್ಲೆ: ಆರೋಪಿಗಳ ಬಂಧನ
ತುಮಕೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ನವೀನ್ ಅವರ ಮೇಲೆ ಹಲ್ಲೆ ನಡೆಸಿ, ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಗಸ್ತಿನಲ್ಲಿ ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಅವರು ಗುಬ್ಬಿ ರಿಂಗ್ರೋಡ್ನಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇನ್ನೋವಾ ಕಾರಿನಲ್ಲಿದ್ದ ವ್ಯಕ್ತಿಗಳನ್ನು ವಿಚಾರಿಸಲು ಜೀಪಿನಿಂದ ಇಳಿದ ಸಂದರ್ಭದಲ್ಲಿ ಆರೋಪಿಗಳಾದ ದಿಲೀಪ್ಕುಮಾರ್, ಸಂತೋಷ್, ವಿತ್ತೇಶ್, ಮುರುಗನ್ ಅವರುಗಳೊಂದಿಗೆ ಇನ್ನು ಇಬ್ಬರು ವಾಹನದಲ್ಲಿ ಕುಳಿತಿದ್ದು, ಪಾನಮತ್ತರಾಗಿದ್ದರು ಎನ್ನಲಾಗಿದೆ. ಅಲ್ಲದೆ ವಾಹನದಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಮುಂದಾದಾಗ ನವೀನ್ ಅವರನ್ನು ಕೆಳಗೆ ತಳ್ಳಿ, ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದರು ಎಂದು ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಆರೋಪಿಯಾದ ದಿಲೀಪ್ ಕುಮಾರ್, ತಮ್ಮ ಸಂಬಂಧಿಯೊಬ್ಬರನ್ನು ಆಸ್ತಿ ವಿಚಾರವಾಗಿ ಅಪಹರಿಸಲು ಹೊಂಚು ಹಾಕುತ್ತಿದ್ದಾಗಿ, ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಲಕ್ಪಾರ್ಕ್ ಸಿಪಿಐ ರಾಧಾಕೃಷ್ಣ ನೇತೃತ್ವ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.