​ಸುಮಲತಾ ಅಂಬರೀಶ್‌ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ: ಎಂ.ಬಿ.ಪಾಟೀಲ್

Update: 2019-02-05 18:23 GMT

ಧಾರವಾಡ, ಫೆ.5: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿರಿಯ ನಟಿ ಸುಮಲತಾ ಅಂಬರೀಶ್ ಅರ್ಹರಿದ್ದಾರೆ. ಹೀಗಾಗಿ ನಮ್ಮ ಪಕ್ಷ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅಭಿಮಾನಿಗಳು ಮಂಡ್ಯದಲ್ಲಿ ಬಹಳ ಇದ್ದಾರೆ. ಅವರ ಕುಟುಂಬ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನು ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿಲ್ಲ ಎಂದರು.

ಆದರೆ, ಸುಮಲತಾ ಅಂಬರೀಶ್ ರಾಜಕೀಯಕ್ಕೆ ಪ್ರವೇಶ ಮಾಡಬೇಕೆಂದು ಜನರ ಒತ್ತಾಯವಿದೆ. ಹಾಗೇನಾದರೂ ಅವರು ರಾಜಕೀಯಕ್ಕೆ ಬರುವುದಾದರೆ ನಿಶ್ಚಿತವಾಗಿ ನಮ್ಮ ಪಕ್ಷ ಬೆಂಬಲ ಕೊಡುತ್ತದೆ. ಇನ್ನು ನಮ್ಮ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಆಗಿಲ್ಲ. ಹೀಗಾಗಿ ಯಾರಿಗೆ ಎಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಹೇಳಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯ ಆಪರೇಷನ್ ಕಮಲದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಆಪರೇಷನ್ ಕಮಲವೂ ಇಲ್ಲ, ಆಪರೇಷನ್ ಥಿಯೇಟರ್ ಕೂಡ ಇಲ್ಲ. ಬಿಜೆಪಿಗೆ ಪೇಷೆಂಟ್ ಸಿಗಲ್ಲ, ಅವರೇ ಮಲಗಿಕೊಂಡು ಆಪರೇಷನ್ ಮಾಡಿಕೊಳ್ಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು ಹಾಗೂ ಶಾಸಕರಿಗೆ ಆಯೋಜಿಸಿರುವ ಔತಣಕೂಟದ ಕುರಿತು ಮಾತನಾಡಿದ ಅವರು, ಎಲ್ಲ ಶಾಸಕರು, ಸಚಿವರಿಗೆ ಸಿದ್ದರಾಮಯ್ಯ ಕರೆದಿದ್ದಾರೆ. ಎಲ್ಲರೂ ಔತಣಕೂಟದಲ್ಲಿ ಭಾಗಿಯಾಗುತ್ತಾರೆ. ನಾಳೆಯಿಂದ ಆರಂಭಗೊಳ್ಳುವ ಸದನವನ್ನು ಜಾಗರೂಕತೆಯಿಂದ ಎದುರಿಸಿ, ಯಶಸ್ವಿಗೊಳಿಸುವ ಸಂಬಂಧ ಚರ್ಚೆ ನಡೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News