"ನನ್ನ ಪ್ರೇಯಸಿಗೆ ಫೋನ್ ಕೊಡಿ": ಭಗ್ನಪ್ರೇಮಿಯ ಕರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ತಲೆನೋವು !
ಹುಬ್ಬಳ್ಳಿ, ಫೆ.07: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಭಗ್ನ ಪ್ರೇಮಿಯೊಬ್ಬ ನಿರಂತರವಾಗಿ ಕರೆ ಮಾಡುತ್ತಿದ್ದು, ಏರ್ಪೋರ್ಟ್ ಸಿಬ್ಬಂದಿಗೆ ಭಾರೀ ತಲೆ ಬಿಸಿ ತಂದಿದೆ. ಈತನ ಕಾಟ ತಪ್ಪಿಸಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅಧಿಕಾರಿಗಳು ಅವಲತ್ತುಕೊಂಡಿದ್ದಾರೆ.
ಗೋವಾ ಮೂಲದ, ದುಬೈನಲ್ಲಿ ವಾಸಿಸುತ್ತಿರುವ ರಾಯ್ ಡಯಾಸ್ ಎಂಬಾತನೇ 'ಕರೆ ಕಿರಿಕ್' ವ್ಯಕ್ತಿ. ಕಳೆದ ಒಂದೂವರೆ ವರ್ಷದಿಂದ ಇಲ್ಲಿನ ವಿಮಾನ ನಿಲ್ದಾಣದ ವಿಮಾನ ಸಂಚಾರ ನಿಯಂತ್ರಿಸುವ ಅತಿ ಸೂಕ್ಷ್ಮಸ್ಥಳ 'ಏರ್ ಟ್ರಾಫಿಕ್ ಕಂಟ್ರೋಲ್' (ಎಟಿಸಿ)ಗೆ ಈತ ಕರೆ ಮಾಡುತ್ತಿದ್ದಾನೆ ಎಂದು ಏರ್ಪೋರ್ಟ್ ಅಧಿಕಾರಿಗಳು ಆರೋಪಿಸಿದ್ದಾರೆ.
ಎಟಿಸಿ ಕೇಂದ್ರಕ್ಕೆ ಸಾಮಾನ್ಯವಾಗಿ ಹೊರಗಿನ ಬೇರೆ ಯಾವುದೇ ಕರೆಗಳು ಬರುವುದಿಲ್ಲ. ಈ ಕೇಂದ್ರದಿಂದ ನಿರ್ದೇಶನ ಬಂದರೆ ಮಾತ್ರ ಪೈಲೆಟ್ ಗೆ ವಿಮಾನ ಹಾರಾಟ ಮತ್ತು ಲ್ಯಾಂಡಿಂಗ್ ಗೆ ಅನುಮತಿ ಸಿಗುತ್ತದೆ. ಆದರೆ, ರಾಯ್ ಡಯಾಸ್ ಕರೆ ಮಾಡುತ್ತಿರುವುದು ಇದೇ ಎಟಿಸಿ ಕೇಂದ್ರಕ್ಕೆ. ಅದರಲ್ಲೂ ವಿಮಾನಗಳ ಸಂಚಾರ ವೇಳೆಯೇ ನಿರಂತರ ಕರೆಗಳು ಬರುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ.
''ಪ್ರತಿ ವಿಮಾನದ ಚಲನವಲನದ ಮಾಹಿತಿ ಎಟಿಸಿ ರೂಂಗೆ ಬರುತ್ತದೆ. ಹೀಗಾಗಿ ದೂರವಾಣಿ ರಿಸೀವರ್ ಎತ್ತಿಡುವಂತಿಲ್ಲ, ಚಾಲನೆಯಲ್ಲಿಟ್ಟರೆ ಈತನ ಕಿರಿಕಿರಿ. ಪ್ರತಿ ಬಾರಿ ಫೋನ್ ಮಾಡಿದಾಗಲೂ ನನ್ನ ಪ್ರೇಯಸಿಗೆ ಕೊಡಿ ಎಂದು ದಂಬಾಲು ಬೀಳುತ್ತಾನೆ. ಏರ್ಪೋರ್ಟ್ ಹಿಂದಿನ ನಿರ್ದೇಶಕ ಶಿವಾನಂದ ಬೇನಾಳ ಅವಧಿಯಿಂದಲೂ ದಿನಕ್ಕೆ 40-50 ಬಾರಿ ಕರೆ ಮಾಡುತ್ತಿದ್ದಾನೆ. ಏನೂ ಉತ್ತರ ಕೊಡದೇ ಸುಮ್ಮನಿದ್ದರೆ ನಿಮ್ಮ ವಿಮಾನ ನಿಲ್ದಾಣವನ್ನು ಉಡಾಯಿಸುತ್ತೇನೆ ಎನ್ನುವ ಬೆದರಿಕೆ ಹಾಕುತ್ತಾನೆ'' ಎಂದು ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ. ಏರ್ಪೋರ್ಟ್ ಅನ್ನು ಉಡಾಯಿಸುವ ಬೆದರಿಕೆ ಕರೆ ಬಂದರೂ ಪೊಲೀಸರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಭಗ್ನ ಪ್ರೇಮಿ: ಏರ್ಪೋರ್ಟ್ ಸಿಬ್ಬಂದಿ ಪ್ರಕಾರ, ರಾಯ್ ಡಯಾಸ್ ಗೋವಾ ಮೂಲದ ವ್ಯಕ್ತಿ. ಗೋವಾ ಏರ್ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮತ್ತು ಈತ ಗಾಢವಾಗಿ ಪ್ರೀತಿಸುತ್ತಿದ್ದರು. ಯುವತಿಯು ಹುಬ್ಬಳ್ಳಿಗೆ ವರ್ಗವಾದ ಬಳಿಕ ಆಕೆ ಪ್ರೀತಿ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. ಇದರಿಂದ ಕಂಗಾಲಾದ ರಾಯ ಅವಳಿಗೆ ನಿತ್ಯ ಫೋನ್ ಕರೆ ಮಾಡಿ ತಲೆ ತಿನ್ನುತ್ತಿದ್ದ. ಅಲ್ಲದೇ ಆಕೆಯ ಮದುವೆ ಮುರಿದುಬೀಳುವಂತೆ ನೋಡಿಕೊಂಡಿದ್ದ ಎನ್ನಲಾಗಿದ್ದು, ಇದರಿಂದ ನೊಂದ ಯುವತಿ ಮೊಬೈಲ್ ನಂಬರ್ ಬದಲಾಯಿಸಿದ್ದಳು. ನಂತರ ಕೆಲಸಕ್ಕೆಂದು ದುಬೈಗೆ ತೆರಳಿದ ರಾಯ, ಆಕೆಯನ್ನು ಹೇಗಾದರೂ ಸಂಪರ್ಕಿಸಲು ಹೆಣಗಾಡುತ್ತಿದ್ದಾನೆ ಎಂದು ಏರ್ಪೋರ್ಟ್ ಅಧಿಕಾರಿಗಳು ಹೇಳುತ್ತಾರೆ.
ಏರ್ಪೋರ್ಟ್ ಗೆ ಬೆದರಿಕೆ ಒಡ್ಡಿದ ಮತ್ತು ನಿರಂತರ ಕರೆ ಮಾಡುತ್ತಿರುವ ಆರೋಪಿ ಪತ್ತೆಗೆ ಭಾರಿ ಪ್ರಯತ್ನ ನಡೆಸಿದ್ದೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಅವರು ತಿಳಿಸಿದ್ದಾರೆ.