ನಿರ್ಮಾಪಕ ಕುಮಾರಸ್ವಾಮಿಗೆ ಆಡಿಯೋ ಬಿಡುಗಡೆ ಮಾಡುವುದು ಕರಗತವಾಗಿದೆ: ಜಗದೀಶ್ ಶೆಟ್ಟರ್ ಲೇವಡಿ

Update: 2019-02-08 12:50 GMT

ಹುಬ್ಬಳ್ಳಿ, ಫೆ.08: ಸಿಎಂ ಕುಮಾರಸ್ವಾಮಿ ಆಡಿಯೋ ವೀಡಿಯೋ ಬಿಡುಗಡೆ ಮಾಡುವುದರಲ್ಲಿ ತುಂಬಾ ಎಕ್ಸ್ ಪರ್ಟ್. ಅಲ್ಲದೇ ಅವರು ನಿರ್ಮಾಪಕರು. ಹೀಗಾಗಿ ಆಡಿಯೋ ಬಿಡುಗಡೆ ಮಾಡುವುದು ಅವರಿಗೆ ಕರಗತವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಸಿಎಂ ಕುಮಾರಸ್ವಾಮಿ ಆಡಿಯೋ ಬಿಡುಗಡೆ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ತರಹದ ಆಡಿಯೋ ಸಾಕಷ್ಟು ಬಿಡುಗಡೆಯಾಗಿವೆ. ಕುಮಾರಸ್ವಾಮಿ ಈ ರೀತಿಯ ಆಡಿಯೋ ಸಾಕಷ್ಟು ಬಿಡುಗಡೆ ಮಾಡಿದ್ದಾರೆ. ಅವರಿಗೆ ಇಂತಹ ಟೆಕ್ನಿಕ್ ಬಗ್ಗೆ ಎಲ್ಲವೂ ಗೊತ್ತಿದೆ. ಆಡಿಯೋ ವೀಡಿಯೋ ಬಿಡುಗಡೆ ಮಾಡುವುದರಲ್ಲಿ ಅವರು ತುಂಬಾ ಎಕ್ಸ್ ಪರ್ಟ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಬಗ್ಗೆ ಈಗಾಗಲೇ ಯಡಿಯೂರಪ್ಪ ಅವರು ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರದು ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್. ಏನಾದರೂ ಆಪಾದನೆ ಮಾಡುವುದು ನಂತರ ಜಾರಿಕೊಳ್ಳುವುದು. ಮೊದಲಿನಿಂದಲೂ ಅವರಿಗೆ ಇಂತಹ ಸ್ವಭಾವವಿದೆ ಎಂದು ಆರೋಪಿಸಿದರು.

ಶಾಸಕರು ಗೈರು ಹಾಜರಾಗಿದ್ದು, ನಾವೇನು ಅವರನ್ನು ಹಿಡಿದುಕೊಂಡಿದ್ದೇವಾ? ಶಾಸಕರಿಗೆ ವಿಪ್ ಜಾರಿ ಮಾಡಿದ್ದರೂ ಸದನಕ್ಕೆ ಹೋಗಲು ತಯಾರಿಲ್ಲ. ಮೈತ್ರಿ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಸುಖಾ ಸುಮ್ಮನೆ ಬಿಜೆಪಿ ಮೇಲೆ ಕುಮಾರಸ್ವಾಮಿ ಆಪಾದನೆ ಮಾಡುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News