ತಲೆಯ ಮೇಲೆ ಮರದ ದಿಮ್ಮಿ ಬಿದ್ದು ಯುವಕ ಸಾವು
ಕೊಪ್ಪ, ಫೆ.9: ಟ್ರಾಕ್ಟರ್ ಗೆ ಮರದ ದಿಮ್ಮಿಗಳನ್ನು ತುಂಬಿಸುತ್ತಿದ್ದಾಗ ದಿಮ್ಮಿಯೊಂದು ಯುವಕನ ತಲೆಯ ಮೇಲೆ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ತಾಲೂಕಿನ ನಿಲುವಾಗಿಲು ಸಮೀಪದ ಕಲ್ಮಕ್ಕಿಯಲ್ಲಿ ನಡೆದಿದೆ.
ಜೋಗಿಸರದ ಕರೀಂಸಾಬ್ ಎಂಬವರ ಮಗ ನಾಸೀರ್(30) ಮೃತ ಯುವಕ. ತಂದೆ ತಾಯಿ ಜೊತೆ ವಾಸವಾಗಿದ್ದ ಈತನಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರಿ ಇದ್ದಾರೆ.
ಆಟೋ ಚಾಲಕನಾಗಿದ್ದ ನಾಸೀರ್ ಬಿಡುವಿದ್ದಾಗ ಟಿಂಬರ್ ಲೋಡ್ಗೆ ಹೋಗುತ್ತಿದ್ದ, ಈ ಹಿಂದೆಯೂ ಟಿಂಬರ್ ಕೆಲಸ ಮಾಡುತ್ತಿದ್ದ ಈತ ಮಧ್ಯದಲ್ಲಿ ವಿದೇಶಕ್ಕೆ ಹೊಗಿದ್ದ, ಒಂದು ವರ್ಷದ ಹಿಂದೆ ಮತ್ತೆ ವಾಪಸ್ಸು ಕೊಪ್ಪಕ್ಕೆ ಬಂದು ಆಟೋ ಓಡಿಸುತ್ತಿದ್ದ. ಗುರುವಾರ ಬೆಳಿಗ್ಗೆ ಕೊಪ್ಪ ಬಸ್ಸ್ಟಾಂಡ್ ಆಟೋ ನಿಲ್ದಾಣದ ಬಳಿ ತನ್ನ ಅಟೋ ನಿಲ್ಲಿಸಿ ಟಿಂಬರ್ ಕೆಲಸಕ್ಕೆ ಹೋಗಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ರಾಕ್ಟರ್ ಮಾಲಕ ಕೇಶವಮೂರ್ತಿ ಮತ್ತು ಟಿಂಬರ್ ಗುತ್ತಿಗೆದಾರ ಫೈಜಲ್ ಎಂಬವರ ವಿರುದ್ಧ ಹರಿಹರಪುರ ಠಾಣೆಯಲ್ಲಿ ದೂರು ದಾಖಲಾಗಿದೆ.