ಹಲ್ಲೆ ಆರೋಪಿ ಶಾಸಕ ಗಣೇಶ್ ಬಿಜೆಪಿ ರಕ್ಷಣೆಯಲ್ಲಿದ್ದಾರೆ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-02-10 14:10 GMT
ಶಾಸಕ ಗಣೇಶ್/ ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಫೆ.10: ಶಾಸಕ ಆನಂದ್‌ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ. ಅವರನ್ನು ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 

ರವಿವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗಣೇಶ್ ಅಧಿವೇಶನಕ್ಕೂ ಬಂದಿಲ್ಲ. ಅಂಡಮಾನ್ ನಿಕೋಬಾರ್‌ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ವಿಪ್ ಕೂಡ ಜಾರಿಯಾಗಿದೆ. ಅವರನ್ನು ಸದ್ಯದಲ್ಲಿಯೇ ಬಂಧಿಸುತ್ತೇವೆ ಎಂದು ಹೇಳಿದರು. ನಮ್ಮ ಇಲಾಖೆಯಲ್ಲಿ ಯಾರೂ ಗಣೇಶ್ ಸಂಪರ್ಕದಲ್ಲಿ ಇಲ್ಲ. ಅವರು ಬಿಜೆಪಿ ರಕ್ಷಣೆಯಲ್ಲಿದ್ದಾರೆ ಎಂದು ಹೇಳಿದರು.

ಪೊಲೀಸ್ ಇಲಾಖೆಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಹೊಸ ಜೈಲು ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. ಪೊಲೀಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಒಳ್ಳೆಯ ಅಧಿಕಾರಿಗಳನ್ನು ನೇಮಿಸಲಾಗುವುದು. ಹೊಸ ಠಾಣೆಗಳ ನಿರ್ಮಾಣ ಸದ್ಯಕ್ಕಿಲ್ಲ. ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿ ಇವೆ. ಅಲ್ಲದೆ, ಮುಂಬೈ ಫೆಫೋರ್ಸ್ ಹಾಗೂ ಆಂಧ್ರದ ಆಕ್ಟೋಪಸ್ ಫೋರ್ಸ್ ಬಹಳ ಶಕ್ತಿಯಾಗಿವೆ. ನಮ್ಮ ರಾಜ್ಯದ ಗರುಡ ಪಡೆಯೂ ಕೂಡ ಅವುಗಳಂತೆ ಆಗಬೇಕೆಂದು ಇದೇ ವೇಳೆ ಪಾಟೀಲ್ ತಿಳಿಸಿದರು.

ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಆಗಬೇಕೆಂಬ ಒತ್ತಾಯವಿದ್ದು, ಮುಖ್ಯಮಂತ್ರಿಗಳು ದ್ರಾಕ್ಷಿ ಬೆಳೆಗಾರರ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ. ಭೂತನಾಳು ಕೆರೆ ಅಭಿವದ್ಧಿಗೆ 9.13 ಲಕ್ಷ ಬಿಡುಗಡೆಯಾಗಿದ್ದು, ಇನ್ನೂ 4 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News