ಒಂದೇ ತಂಡದಿಂದ ಕಲಬುರ್ಗಿ-ಗೌರಿ ಹತ್ಯೆ ?

Update: 2019-02-11 15:00 GMT

ಬೆಂಗಳೂರು, ಫೆ.11: ಸಂಶೋಧಕ, ವಿಚಾರವಾದಿ ಡಾ.ಎಂ.ಎಂ ಕಲಬುರ್ಗಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಗುಂಪು ಒಂದೇ ಎಂದು ತಿಳಿದುಬಂದಿದೆ.

ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಕೊನೆ ಹಂತ ತಲುಪಿದೆ ಎಂದು ಸಿಐಡಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹತ್ತು ಆರೋಪಿಗಳಾದ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ರಾಮಚಂದ್ರ ಬದ್ದಿ, ಅಮಿತ್ ದೆಗ್ವೇಕರ್, ಭರತ್‌ ಕುರ್ಣೆ, ಸುದನ್ವ, ರಾಜೇಶ್ ಬಂಗೇರ, ಸುಜಿತ್, ಶರದ್ ಕಲಸ್ಕರ್ ಸೇರಿ ಹತ್ತು ಜನರು ಕಲಬುರ್ಗಿ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಲಾಗುತ್ತಿದೆ.

ಗೌರಿ ಹತ್ಯೆಯ ಶರದ್ ಕಲಸ್ಕರ್, ಕಲಬುರ್ಗಿ ಹತ್ಯೆಗೆ ಬಳಕೆಯಾಗಿದ್ದ ಬೈಕ್ ತಂದು ಕೊಟ್ಟಿದ್ದನು. ನಂತರ ಗಣೇಶ್ ಮಿಸ್ಕಿನ್ ಮತ್ತು ರಾಮಚಂದ್ರ ಬದ್ದಿ, ಗೌರಿ ಹತ್ಯೆ ಮತ್ತು ಕಲಬುರ್ಗಿ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆ ಮಾಡಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಆರೋಪಿಗಳು ಪಿಸ್ತೂಲ್ ನಾಶ ಪಡಿಸಿದ್ದು, ಪಿಸ್ತೂಲ್ ಪತ್ತೆಗಾಗಿ ಎಸ್‌ಐಟಿ ಮತ್ತು ಸಿಐಡಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News