ಉಪ ತಹಶೀಲ್ದಾರ್ ಮನೆಯಲ್ಲಿ ನಗದು, ಚಿನ್ನಾಭರಣ ಕಳವು

Update: 2019-02-11 17:32 GMT

ಶಿವಮೊಗ್ಗ, ಫೆ.11: ಮನೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ ನಗನಾಣ್ಯ ಅಪಹರಿಸಿ ಕಳ್ಳರು ಪರಾರಿಯಾಗಿರುವ ಘಟನೆ ನಗರದ ಹೊರವಲಯ ಸ್ವಾಮಿ ವಿವೇಕಾನಂದ ಬಡಾವಣೆ ಎ ಬ್ಲಾಕ್ ನಲ್ಲಿ ತಡರಾತ್ರಿ ನಡೆದಿದೆ. 

ಉಪತಹಶೀಲ್ದಾರ್ ಕೃಷ್ಣಮೂರ್ತಿ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಯಲ್ಲಿದ್ದ 30 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು, ಶ್ವಾನ ದಳ ತಂಡಗಳು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಭಾನುವಾರ ಪೊಲೀಸ್ ಇಲಾಖೆ ಜನ ಸಂಪರ್ಕ ಸಭೆ ಆಯೋಜಿಸಿತ್ತು. ಬಡಾವಣೆಯಲ್ಲಿ ಅಪರಾಧ ಕೃತ್ಯಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸುವುದಾಗಿ ಪೊಲೀಸರು ಹೇಳಿದ್ದರು. ಆದರೆ ಅದೇ ಬಡಾವಣೆಯಲ್ಲಿ ಕಳ್ಳರು ಮನೆಯೊಂದರಲ್ಲಿ ನಗನಾಣ್ಯ ದೋಚಿ ಪರಾರಿಯಾಗಿರುವುದು ಸ್ಥಳೀಯ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News