ಮಂಡ್ಯ: ಕೂಲಿ ದರ ನಿಗದಿಯಲ್ಲಿ ಮೂಡದ ಒಮ್ಮತ; ಸಭೆಯಿಂದ ಹೊರ ನಡೆದ ಜಿಲ್ಲಾಧಿಕಾರಿ

Update: 2019-02-12 18:08 GMT

ಮಂಡ್ಯ,ಫೆ.12: ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ನಡೆದ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರ ಒಕ್ಕೂಟ ಮತ್ತು ಸಾಗಾಣೆಕೆ ಗುತ್ತಿಗೆದಾರರು, ಕಾರ್ಮಿಕ ಅಧಿಕಾರಿಗಳ ಜಂಟಿ ಸಭೆಯಲ್ಲಿ ಕೂಲಿ ದರ ನಿಗದಿಯಲ್ಲಿ ಒಮ್ಮತ ಮೂಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸಭೆಯಿಂದ ಹೊರ ನಡೆದ ಘಟನೆ ಜರುಗಿತು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅಧ್ಯಕ್ಷತೆಯಲ್ಲಿ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರ ಕೂಲಿ ದರ ಪರಿಷ್ಕರಣೆ ಸಂಬಂಧ ನಡೆದ ಸಭೆಯಲ್ಲಿ ಕಾರ್ಮಿಕರ ಒಕ್ಕೂಟದ ಸದಸ್ಯರು ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಬರ ಇದ್ದ ಹಿನ್ನಲೆ ಕಾರ್ಮಿಕರೆಲ್ಲರೂ ಒಟ್ಟಗೂಡಿ ಸ್ವಯಂ ನಿರ್ಧಾರ ಕೈಗೊಂಡು ಕೂಲಿ ದರವನ್ನು ಶೇ.23ರಷ್ಟು ಪಡೆಯಲು ನಿರ್ಧರಿಸಿದ್ದೆವು. ಈ ಬಾರಿ ಕನಿಷ್ಠ 23ರಷ್ಟು ಕೂಲಿ ದರವನ್ನಾದರೂ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಲೋಡಿಂಗ್ ಮತ್ತು ಅನ್‍ಲೋಡಿಂಗ್‍ಗೆ ಕ್ವಿಂಟಾಲ್‍ಗೆ 11.5 ರೂ. ನಿಗದಿಯಾಗಬೇಕು. ಈಗಾಗಲೇ ಸಿಮೆಂಟ್ ಗೋದಾಮಿನ ಮಾಲಕರು ಲೋಡಿಂಗ್ ಮತ್ತು ಅನ್‍ಲೊಂಡಿಗ್‍ಗೆ ಟನ್‍ಗೆ 10 ರೂ. ಹೆಚ್ಚಳ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇತರೆ ಎಲ್ಲಾ ಸರಕುಗಳಿಗೆ ಕನಿಷ್ಠ 10 ರೂ. ನಿಗದಿಯಾಗಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಗಾಣೆಕೆ ಗುತ್ತಿಗೆದಾರರು, ಒಂದೇ ಬಾರಿ ಶೇ.23 ರಷ್ಟು ಕೂಲಿ ದರ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಅಕ್ಕಪಕ್ಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲೇ ಗರಿಷ್ಠ ಮಟ್ಟದ ಕೂಲಿ ದರ ನೀಡಲಾಗುತ್ತಿದೆ. ಕೂಲಿ ದರವನ್ನು 5 ರೂ. ಹೆಚ್ಚಳ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಬ್ಬರ ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರು ಕೂಲಿ ದರ ಬೇಡಿಕೆಯಿಂದ ಗುತ್ತಿಗೆದಾರರಿಗೆ ಸಮಸ್ಯೆ ಉಂಟಾಗಬಾರದು, ಹಾಗೆಂದು ಗುತ್ತಿಗೆದಾರರು ಕಡಿಮೆ ಕೂಲಿ ನೀಡಿ ಕಾರ್ಮಿಕರ ಶ್ರಮಕ್ಕೆ ಅಗೌರವ ತೋರಬಾರದು. ಇಬ್ಬರಿಗೂ ನಷ್ಟ ಉಂಟಾಗದ ರೀತಿಯಲ್ಲಿ ಜಿಲ್ಲಾಡಳಿತ ಕೂಲಿದರವನ್ನು 7.5 ರೂ.ಗೆ ನಿಗದಿಪಡಿಸುತ್ತಿದೆ. ಕಾರ್ಮಿಕರು ಮತ್ತು ಗುತ್ತಿಗೆದಾರರು ಒಮ್ಮತದ ತೀರ್ಮಾನ ಕೈಗೊಳ್ಳಲು ಮುಂದಾಗಬೇಕು. ಜತೆಗೆ ಮುಂದಿನ ವರ್ಷ ಕೂಲಿ ದರ ಪರಿಷ್ಕರಣೆ ಬದಲಿಸಿಕೊಳ್ಳಿ ಎಂದು ಸೂಚನೆ ನೀಡಿದರು.

ಇದಕ್ಕೆ ಸಾಗಾಣಿಕೆ ಗುತ್ತಿಗೆದಾರರು ಪ್ರತಿಕ್ರಿಯಿಸಿ, ಗುತ್ತಿಗೆ ಅವಧಿ ಪ್ರತಿ 2 ವರ್ಷಗಳಿಗೊಮ್ಮೆ ಇದ್ದು, ಒಂದು ವರ್ಷಕ್ಕೆ ಕೂಲಿ ದರ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದರು. ಕಾರ್ಮಿಕರ ಒಕ್ಕೂಟವು 7.5 ರೂ. ನಿಗದಿ ಮಾಡಿ ಒಂದು ವರ್ಷಕ್ಕೆ ಕೂಲಿ ದರ ಪರಿಷ್ಕರಣೆ ಮಾಡಿದರೆ ನಮ್ಮ ಅಭ್ಯಂತರವೇನಿಲ್ಲ. ಬದಲಿಗೆ ಎರಡು ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಮಾಡುವುದಾದರೆ 9.5ರೂ. ದರ ಹೆಚ್ಚಳ ಮಾಡಬೇಕು. ಪ್ರತಿ ವರ್ಷ ಏ.1ರಂದು ಕಾರ್ಮಿಕ ಇಲಾಖೆ ಬಿಡುಗಡೆ ಮಾಡುವ ಬೆಲೆ ಏರಿಕೆ ಮತ್ತು ತುಟ್ಟಿ ಭತ್ಯೆಗನುಗುಣವಾಗಿ ಕೂಲಿದರ ಹೆಚ್ಚಳ ಮಾಡಬೇಕು ಎಂದು ಹೇಳಿದರು.

ಅಂತಿಮವಾಗಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಕೂಲಿ ದರ ಪರಿಷ್ಕರಣೆ ಸಂಬಂಧ ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿಷಯದಲ್ಲಿ ನಾನು ಮಧ್ಯ ಪ್ರವೇಶಿಸುವ ಅಗತ್ಯವಿಲ್ಲದಿದ್ದರೂ ಸಹ ಸಭೆಯ ಅಧ್ಯಕ್ಷತೆ ವಹಿಸಿದ್ದೇನೆ. ಒಮ್ಮತದ ತೀರ್ಮಾನ ಕೈಗೊಳ್ಳದಿದ್ದರೆ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ಸಭೆಯಿಂದ ಹೊರ ನಡೆದರು.

ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ನಾಗೇಂದ್ರ, ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಕುಮುದಾ, ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರ ಒಕ್ಕೂಟದ ವರದರಾಜೇಂದ್ರ, ಪುಟ್ಟಸಾಮಿ, ದೇವರಾಜು, ಮನು, ಮುತ್ತಯ್ಯ, ಕೃಷ್ಣಪ್ಪ, ಸಿದ್ದರಾಜು, ಸುರೇಶ್, ಸಾಗಾಣಿಕೆ ಗುತ್ತಿಗೆದಾರರ ಸಂಘದ ನಾಗರಾಜು, ವೆಂಟಕೇಶ್, ಸುರೇಶ್, ಶಂಕರ್, ಹರಿಪ್ರಸಾದ್ ರೆಡ್ಡಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News