ಚಾರ್ಜ್‍ಗೆ ಇಟ್ಟಿದ್ದ ಮೊಬೈಲ್ ಸ್ಫೋಟ: ಯುವಕನಿಗೆ ಗಾಯ

Update: 2019-02-13 17:32 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಫೆ. 13: ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಯುವಕನ ಕೈ ಬೆರಳು, ತೊಡೆಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕುಂದದಲ್ಲಿ ಸೋಮವಾರ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕುಂದದ ನಿವಾಸಿ ಸ್ವಾಮಿ ಎಂಬವರ ಪುತ್ರ ಪ್ರಕಾಶ್ (18) ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಕೈ ಬೆರಳುಗಳಿಗೆ ಹಾಗೂ ತೊಡೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಕುಟುಂಬಸ್ಥರು ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ಗಾಯಾಳು ಪ್ರಕಾಶ್ ತನ್ನ ಮನೆಯಲ್ಲಿ ಮೊಬೈಲ್ ಚಾರ್ಜ್‍ಗೆ ಹಾಕಿ ಪಕ್ಕದಲ್ಲಿರಿಸಿಕೊಂಡಿದ್ದ ವೇಳೆ ದಿಢೀರ್ ಆಗಿ ಬ್ಯಾಟರಿ ಸ್ಫೋಟಿಸಿದೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಈ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇನ್ನಷ್ಟೆ ದೂರು ದಾಖಲಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News