ಶಿವಮೊಗ್ಗ: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2019-02-15 18:03 GMT

ಶಿವಮೊಗ್ಗ, ಫೆ.15: ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಕಟ್ಟೆ ಗ್ರಾಮದ ಅವಿನಾಶ್ ಬಿನ್ ಶೇಖರಪ್ಪ, ಶಿವು ಬಿನ್ ರವಿ, ಸಂತೋಷ್ ಬಿನ್ ಕರಿಯಪ್ಪ, ಪ್ರತಾಪ್ ಬಿನ್ ಅಣ್ಣಪ್ಪ ಹಾಗೂ ಮೈಲಾರಿ ಬಿನ್ ಗಜೇಂದ್ರಪ್ಪ ಎಂಬವರಿಗೆ ಶಿಕ್ಷೆ ವಿಧಿಸಿ ಶಿವಮೊಗ್ಗದ 3 ನೇ ಸತ್ರ ನ್ಯಾಯಾಧೀಶ ಎ.ಹರೀಶ್‍ರವರು ಆದೇಶ ಹೊರಡಿಸಿದ್ದಾರೆ.

ಬೊಮ್ಮನಕಟ್ಟೆ ಗ್ರಾಮದ ಗೀರೀಶ್, ಸಂದೇಶ್ ಮತ್ತು ಕಾಂತರಾಜ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಗಿರೀಶ್ ಎಂಬುವವರ ಸಾವಿಗೆ ಕಾರಣಾರಾದ ಅದೇ ಗ್ರಾಮದ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಅವಿನಾಶ್ ಮತ್ತು ಶಿವು ಎಂಬುವವರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ 1ಲಕ್ಷ ರೂ. ದಂಡ ಮತ್ತು ಸಂತೋಷ್.ಕೆ, ಪ್ರತಾಪ್ ಹಾಗೂ ಮೈಲಾರಿ ಎಂಬುವವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 10 ಸಾವಿರ ರೂ ದಂಡ ವಿಧಿಸಲಾಗಿದೆ.

2017 ರಲ್ಲಿ ಬೈಕ್ ಓಡಿಸುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದ್ದು, ಇದನ್ನೆ ನೆಪವಾಗಿಟ್ಟುಕೊಂಡು ಆರೋಪಿಗಳು ಗಿರೀಶ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಇನ್ನಿಬ್ಬರಿಗೆ ತೀವ್ರ ಸ್ವರೂಪದ ಗಾಯಗಳನ್ನು ಮಾಡಿದ್ದರು. ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜೆ. ಶಾಂತರಾಜ್ ಅವರು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News