ಹಣ ಪಡೆದಿರುವುದು ಸಾಬೀತಾದರೆ ಆತ್ಮಹತ್ಯೆ ಮಾಡುತ್ತೇನೆ: ಶಾಸಕ ಉಮೇಶ್ ಜಾಧವ್

Update: 2019-02-17 14:08 GMT

ಕಲಬುರ್ಗಿ, ಫೆ. 17: ನಾನು ‘ಆಪರೇಷನ್ ಕಮಲ’ಕ್ಕೆ ಬಲಿಯಾಗಿ 50 ಕೋಟಿ ರೂ.ಪಡೆದಿದ್ದೇನೆಂದು ಸಾಬೀತು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಹೀಗಾಗಿ ನಾನು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ನಾನು ಟೈಂಪಾಸ್ ಮಾಡುವ ರಾಜಕಾರಣಿಯಲ್ಲ. ಜನರು ಕೊಟ್ಟ ಅಧಿಕಾರ ಜನರ ಕೆಲಸಕ್ಕಾಗಿ ವಿನಿಯೋಗ ಆಗಬೇಕು. ಐದು ವರ್ಷಗಳಲ್ಲಿ ಐತಿಹಾಸಿಕ ಕೆಲಸಗಳನ್ನು ಮಾಡಿದ್ದೇನೆ. ಮೈತ್ರಿ ಸರಕಾರ ಬಂದ ಮೇಲೆ ಕೆಲವೊಂದು ಲೋಪಗಳಾಗುತ್ತಿವೆ. ಸರಕಾರದ ವರ್ತನೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಸೇರಿದಂತೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯಬೇಕಿತ್ತು. ಆದರೆ, ಅವು ಯಾವು ಆಗುತ್ತಿಲ್ಲ. ಹೀಗಾಗಿ ಕ್ಷೇತ್ರದ ಮತದಾರರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News