ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ

Update: 2019-02-17 14:29 GMT

ವಿಜಯಪುರ,ಫೆ.17: ಕೆಲವು ದಿನಗಳಿಂದ ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮಾರ್ದನಿಸಿದೆ. ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ರೌಡಿಶೀಟರ್ ಎನ್ನಲಾದ ಅರ್ಜುನ ಡೊಳ್ಳಿ (52) ಮೇಲೆ ಗುಂಡು ಹಾರಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿದ್ದು, ದಾಳಿಯಿಂದಾಗಿ ಅರ್ಜುನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಜಮೀನು ಹಂಚಿಕೆ ವಿಚಾರದಲ್ಲಿ ಈ ಕೊಲೆ ನಡೆದಿದ್ದು, ಕುಟುಂಬಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಅರ್ಜುನ ಡೊಳ್ಳಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಇಂಡಿ ಪಟ್ಟಣದ ಡಾಬಾವೊಂದರ ಮುಂಭಾಗದಲ್ಲಿ ನಡೆದ ಕೊಲೆ ಪ್ರಕರಣ, ಹಲಸಂಗಿ ಗ್ರಾಮದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಸೇರಿದಂತೆ ಇಂಡಿ, ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರ್ಜುನ ಅವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿ ಲಭ್ಯವಾಗಿವೆ. 

ಅಶೋಕ ಡೊಳ್ಳಿ, ಅಮಸಿದ್ದ ಡೊಳ್ಳಿ, ಸಂಗಪ್ಪ ಡೊಳ್ಳಿ, ಗಣಪತಿ ಹೂಗಾರ್ ಹಾಗೂ ಮಲ್ಲು ಹೂಗಾರ್ ಎಂಬವರು ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಲೈಸನ್ಸ್ ಹೊಂದಿದ ರಿವಾಲ್ವರ್ ನಿಂದ ಗುಂಡು ಹಾರಿಸಿ, ಬಳಿಕ ಮಾರಕಾಸ್ತ್ರದಿಂದ ಕೊಚ್ಚಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಝಳಕಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News