ಸೀಟು ಹಂಚಿಕೆ ಬಗ್ಗೆ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ: ಉಪಮುಖ್ಯಮಂತ್ರಿ ಪರಮೇಶ್ವರ್
Update: 2019-02-17 14:48 GMT
ಬೆಂಗಳೂರು, ಫೆ. 17: ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ನಾಳೆ ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರವಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಹಾಗೂ ಕ್ಷೇತ್ರಗಳ ಆಯ್ಕೆ ಸಂಬಂಧ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು
ಸೋಮವಾರ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಕಳೆದ ವರ್ಷದ ಯೋಜನೆಗಳ ಕೆಲಸ ಆರಂಭವಾಗಿದ್ದು, ಯೋಜನೆಗಳು ಮುಗಿದ ಮೇಲೆ ಹಣದ ವೆಚ್ಚದ ಚಿತ್ರಣ ಗೊತ್ತಾಗಲಿದೆ. ಈ ವರ್ಷಕ್ಕೆ 8,015 ಕೋಟಿ ರೂ.ಕ್ರಿಯಾಯೋಜನೆ ನೀಡಲಾಗಿದೆ. ರಸ್ತೆಗಳ ವೈಟ್ ಟ್ಯಾಪಿಂಗ್, ಚರಂಡಿ ಅಭಿವೃದ್ಧಿ ಕೆಲಸ, ಫ್ಲೈಓವರ್, ಅಂಡರ್ ಪಾಸ್ಗಳ ನಿರ್ಮಾಣ ಸೇರಿದಂತೆ ನಗರದ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.