ಸಿಎಂ ಭೇಟಿ ವೇಳೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಶಾಸಕ ಎಲ್.ನಾಗೇಂದ್ರ

Update: 2019-02-19 17:23 GMT

ಮೈಸೂರು,ಫೆ.19: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ದೇವರಾಜ ಮಾರುಕಟ್ಟೆ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ತನಗೆ ಸರಿಯಾದ ಮಾಹಿತಿ ನೀಡದೆ ಕಡೆಗಣಿಸಿದ್ದಾರೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಘಟನೆ ನಡೆಯಿತು.

ಮುಖ್ಯಮಂತ್ರಿ ಭೇಟಿ ನಂತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎಲ್.ನಾಗೇಂದ್ರ, ಅಧಿಕಾರಿಗಳು ಅಧಿಕಾರದ ಅಮಲಿನಲ್ಲಿ ಮೆರೆಯುತ್ತಿದ್ದಾರೆ. ದೇವರಾಜ ಮಾರುಕಟ್ಟೆಗೆ ಮುಖ್ಯಮಂತ್ರಿಗಳು ಆಗಮಿಸುತ್ತಾರೆ ಎಂದು ಅಧಿಕಾರಿಗಳು ಸ್ಥಳೀಯ ಶಾಸಕನಾದ ನನಗೆ ಮಾಹಿತಿ ನೀಡಿಲ್ಲ, ನಾನು ಬೇರೆಯವಯವರಿಂದ ವಿಷಯ ತಿಳಿದು ಆಗಮಿಸಬೇಕಾಯಿತು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಈ ರೀತಿ ಆಗಿದ್ದರೆ ಸದನದಲ್ಲಿ ಪ್ರಶ್ನೆ ಮಾಡುತ್ತಿದ್ದರು. ದೊಡ್ಡ ಗಲಾಟೆ ಮಾಡಿ ಗದ್ದಲ ಎಬ್ಬಿಸುತ್ತಿದ್ದರು. ಆದರೆ ನಾವು ಆ ರೀತಿ ಮಾಡುವುದಿಲ್ಲ, ಆಡಳಿತ ಪಕ್ಷದವರು ಸ್ಥಳೀಯ ಜನಪ್ರತಿನಿದಿಗಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ನಾನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೂಡ ಪ್ರಶ್ನೆ ಮಾಡಿದ್ದೇನೆ. ಅಧಿಕಾರಿಗಳು ನಡೆದುಕೊಂಡಿರುವ ಬಗ್ಗೆ ಸಿಎಂ ಗಮನಕ್ಕೂ ಕೂಡ ತಂದಿದ್ದೇನೆ. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಿದರೆ ವಿಧಾನಸೌಧದಲ್ಲಿ ಧ್ವನಿ ಎತ್ತುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News