ಜಯಪುರ: ಹೊಟೇಲ್‍ಗೆ ನುಗ್ಗಿ ಮಹಿಳೆಯ ಕೈಕಾಲು ಕಟ್ಟಿ ದರೋಡೆ

Update: 2019-02-20 16:30 GMT

ಚಿಕ್ಕಮಗಳೂರು, ಫೆ.20: ಮಹಿಳೆಯೊಬ್ಬರು ನಡೆಸುತ್ತಿದ್ದ ಹೊಟೇಲ್‍ಗೆ ನುಗ್ಗಿದ ಮೂವರು ಮುಸುಕುಧಾರಿಗಳು ಹೋಟೇಲ್ ಮಾಲಕಿಯ ಕೈ ಕಾಲು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಜಿಲ್ಲೆಯ ಜಯಪುರ ಪಟ್ಟಣದಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪಟ್ಟಣದಲ್ಲಿರುವ ಶಶಿಕಲಾ ಎಂಬವರು ತಮ್ಮ ಮನೆಯಲ್ಲಿ ಹೋಟೇಲ್ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ಮಹಿಳೆ ಮಂಗಳವಾರ ರಾತ್ರಿ ಮನೆಯಲ್ಲಿ ಓಬ್ಬರೇ ಇದ್ದ ವೇಳೆ ಮುಸುಕು ಹಾಕಿಕೊಂಡು ಒಳ ನುಗ್ಗಿದ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಶಶಿಕಲಾ ಅವರಿಗೆ ಪ್ರಾಣ ಬೆದರಿಕೆ ಹಾಕಿ ಕೈಕಾಲು ಕಟ್ಟಿ ಹಾಕಿದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

ಮುಸುಕುಧಾರಿಗಳು ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿದ್ದ ಹೊಟೇಲ್‍ನಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಒಳ ನುಗ್ಗಿ ಮೊದಲು ಊಟ ಕೇಳಿದ್ದಾರೆ, ನಂತರ ಮಹಿಳೆಯನ್ನು ಬೆದರಿಸಿ ಒಡವೆ, ನಗದನ್ನು ದೋಚಿ ಬೈಕ್‍ನಲ್ಲಿ ಪರಾರಿಯಾಗಿದ್ದಾರೆಂದು ಹೊಟೇಲ್ ಮಾಲಕಿ ಶಶಿಕಲಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶಶಿಕಲಾ ಅವರ ಹೊಟೇಲ್‍ಗೆ ಆಗಾಗ್ಗೆ ಊಟಕ್ಕೆ ಬರುತ್ತಿದ್ದವರು ಹೊಂಚು ಹಾಕಿ ದರೋಡೆ ಮಾಡಿರಬಹುದೆಂದು ಸಾರ್ವಜನಿಕರು ಶಂಕಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಬುಧವಾರ ಶಶಿಕಲಾ ಅವರ ಹೋಟೇಲ್‍ನಲ್ಲಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News