ಕಾಂಗ್ರೆಸ್‌ಗೆ ಮುಜುಗರ ಆಗಿರುವುದು ನಿಜ: ಉಗ್ರಪ್ಪ

Update: 2019-02-21 13:00 GMT

ಬಳ್ಳಾರಿ, ಫೆ.21: ಶಾಸಕ ಗಣೇಶ್ ಹಾಗೂ ಆನಂದ ಸಿಂಗ್ ಮಧ್ಯೆ ನಡೆದಿರುವ ಜಗಳದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿರುವುದು ನಿಜ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯ ಕ್ರಮಗಳು ಜರುಗಲಿದೆ ಎಂದು ಸಂಸದ ಉಗ್ರಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಗಣೇಶ್ ಹಾಗೂ ಆನಂದ ಸಿಂಗ್ ಮಧ್ಯೆ ಆಗಬಾರದ್ದು ಆಗಿದೆ. ಈ ಕುರಿತು ಕಾನೂನಿನ ಚೌಕಟ್ಟಿನಲ್ಲಿ ಯಾವ ಕ್ರಮ ಆಗಬೇಕೋ ಅದು ಜರುಗಿಸಬೇಕೆಂದಷ್ಟೇ ಹೇಳುತ್ತೇನೆಂದು ತಿಳಿಸಿದರು.

ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿದ್ದಾರೆ. ಈ ಅಲ್ಪಾವಧಿಯಲ್ಲಿ ನನ್ನಿಂದಾಗಿರುವ ಎಲ್ಲ ರೀತಿಯ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಆದರೆ, ಬಿಜೆಪಿ ಕಳೆದ 15ವರ್ಷದಿಂದ ಈ ಕ್ಷೇತ್ರಕ್ಕೆ ಏನು ಮಾಡಿದ್ದಾರೆಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಈ ಭಾಗದ ಬಡವರ ಶೋಷಿತರ ಕಾರ್ಮಿಕರ ನಿರುದ್ಯೋಗಿಗಳ ಸಮಸ್ಯೆ ಬಗೆಹರಿಸಲು ಬಿಜೆಪಿ ಏನು ಮಾಡಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಾಡಿದ ವಾಗ್ದಾನ ಏನಾಯ್ತು. ಕಪ್ಪು ಹಣ ತರಲು ಕೇವಲ 100 ದಿನ ಕೊಡಿ ಅಂದರು. ಈಗ ಆ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಿಸಲು ಬಜೆಟ್ನಲ್ಲಿ ಚೈನಾ ಮಾದರಿ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಮುಂದಿನ 5 ವರ್ಷದಲ್ಲಿ 5 ಸಾವಿರ ಕೋಟಿ ರೂ. ಬಂಡವಾಳವನ್ನ ಜವಳಿ ಪಾರ್ಕ್‌ಗೆ ನಿರೀಕ್ಷಿಸಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News