ಕಾರು ಢಿಕ್ಕಿ: ಮಾಜಿ ಯೋಧ ಸ್ಥಳದಲ್ಲೇ ಸಾವು
Update: 2019-02-23 12:03 GMT
ಮಡಿಕೇರಿ, ಫೆ.23: ಕಾರು ಢಿಕ್ಕಿ ಹೊಡೆದ ಪರಿಣಾಮ ಮಾಜಿ ಯೋಧರೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದಲ್ಲಿ ನಡೆದಿದೆ. ಮೈತಾಡಿ ಗ್ರಾಮದ ನಿವಾಸಿ ಐಮಂಡ ರವಿ(47) ಮೃತ ವ್ಯಕ್ತಿ.
ಬಾಕ್ಸಿಂಗ್ ಪಟುವಾಗಿದ್ದ ಐಮಂಡ ರವಿ ಅವರು ಎಂದಿನಂತೆ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಅರಮೇರಿ ಗ್ರಾಮದ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭ ಮಲ್ಲಮಟ್ಟಿ ಬಳಿ ವೇಗವಾಗಿ ಬಂದ ಕಾರೊಂದು ರವಿ ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗದ ಚಕ್ರದಡಿ ಸಿಲುಕಿದ ರವಿ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂರ್ನಾಡು ಸಮೀಪದ ಕೊಡಂಬೂರು ಮೂಲದ ಕಾರು ಚಾಲಕನ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.