ದಕ್ಷಿಣ ವಲಯ ಐಜಿಪಿಯಾಗಿ ಉಮೇಶ್ ಕುಮಾರ್ ಅಧಿಕಾರ ಸ್ವೀಕಾರ
Update: 2019-02-23 16:19 GMT
ಮೈಸೂರು,ಫೆ.23: ಮೈಸೂರು ದಕ್ಷಿಣ ವಲಯ ನೂತನ ಐಜಿಪಿಯಾಗಿ ಉಮೇಶ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ದಕ್ಷಿಣ ವಲಯ ಐಜಿಪಿಯಾಗಿ ಕೆ.ವಿ.ಶರತ್ ಚಂದ್ರ ಅವರು ಅಧಿಕಾರ ನಿರ್ವಹಿಸುತ್ತಿದ್ದರು. ಅವರ ವರ್ಗಾವಣೆಯ ಬಳಿಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿದ್ದ ವಿಫುಲ್ ಕುಮಾರ್ ಅವರನ್ನೇ ಐಜಿಪಿಯನ್ನಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ನಿನ್ನೆ ರಾತ್ರಿ ನಡೆದ ಬೆಳವಣಿಗೆಯಲ್ಲಿ ಉಮೇಶ್ ಕುಮಾರ್ ಅವರನ್ನು ದಕ್ಷಿಣ ವಲಯ ಐಜಿಪಿಯಾಗಿ ಆದೇಶ ಹೊರಡಿಸಿದ್ದು, ಇಂದು ಅವರು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಹೂ ಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ನಿನ್ನೆ ರಾಜ್ಯ ಸರ್ಕಾರದಿಂದ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆಗೊಳಿಸಲಾಗಿದ್ದು, ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದರು.