ಮಂಡ್ಯ: ಕಾಡ್ಗಿಚ್ಚಿಗೆ ಅಪಾರ ಪ್ರಮಾಣದ ಅರಣ್ಯ ನಾಶ
Update: 2019-02-25 17:55 GMT
ಮಂಡ್ಯ, ಫೆ.25: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯಾದ್ಯಂತ ಬೆಂಕಿಯ ರುದ್ರನರ್ತನಕ್ಕೆ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಇದೀಗ ಮಂಡ್ಯಕ್ಕೂ ಕಾಡ್ಗಿಚ್ಚು ಆವರಿಸಿದ್ದು, ಸಸ್ಯ ಸಂಕುಲದ ಜೊತೆಗೆ ಸಾಕಷ್ಟು ಮೂಕ ಪ್ರಾಣಿಗಳು ಬಲಿಯಾಗಿವೆ.
ಮಂಡ್ಯದ ಮಳವಳ್ಳಿ ತಾಲೂಕಿನ ಮುತ್ತತ್ತಿಯ ಬಸವನ ಬೆಟ್ಟ, ಶ್ರೀರಂಗಪಟ್ಟಣ ಬಳಿಯ ಕರೀಘಟ್ಟ ಹಾಗೂ ಕೆ.ಆರ್.ಪೇಟೆ ತಾಲೂಕಿನ ಬೆಳ್ಳಿ ಬೆಟ್ಟದ ಕಾವಲ್ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಬೆಂಕಿಯ ಜ್ವಾಲೆಗೆ ಹಾವು, ಮೊಲ, ಜಿಂಕೆ, ಅಳಿಲು ಸೇರಿದಂತೆ ಹಲವು ವಿಧದ ಪ್ರಾಣಿಗಳು ಆಹುತಿಯಾಗಿವೆ. ಅಗ್ನಿಶಾಮಕ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.